ಮೊಹಾಲಿ: ಹೊಡಿ ಬಡಿ ದಾಂಡಿಗ ಕ್ರಿಸ್ ಗೇಲ್ ಮತ್ತೆ ಬಂದಿದ್ದಾರೆ... ಅವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕನ್ನಡಿಗ, ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಅವರು ಐಪಿಎಲ್ ನ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ ರಾತ್ರಿ ನಡೆದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕ್ರಿಸ್ ಗೇಲ್ ಎರಡನೇ ಅತಿ ವೇಗದ ಅರ್ಧ ಶತಕ ದಾಖಲಿಸುವ ಮೂಲಕ ಕಿಂಗ್ಸ್ ಇಲೆವನ್ ಪಂಜಾಬ್ ಗೆಲುವಿಗೆ ಕಾರಣರಾದರು.
ಕ್ರಿಸ್ ಗೇಲ್ ಬಂದಿರುವುದು ನಮಗೆ ಅದ್ಭುತ ಸುದ್ದಿ. ಆದರೆ ಎದುರಾಳಿ ತಂಡಕ್ಕೆ ಇದೊಂದು ಕೆಟ್ಟ ಸುದ್ದಿ. ಏಕೆಂದರೆ ಕ್ರಿಸ್ ಒಬ್ಬರೇ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಕ್ರಿಸ್ ನಿನ್ನೆ ಅದನ್ನೇ ಮಾಡಿದ್ದಾರೆ ಎಂದು ಪಂದ್ಯದ ನಂತರ ನಡೆದ ಮಾಧ್ಯಮ ಸಂವಾದದಲ್ಲಿ ರಾಹುಲ್ ಹೇಳಿದ್ದಾರೆ.
ಕ್ರಿಸ್ ಗೇಲ್ ಅವರು ಮುಂದೆಯೂ ಇದೇ ರೀತಿ ಹೊಡಿ ಬಡಿ ಆಟವನ್ನು ಪ್ರದರ್ಶಿಸಬೇಕು ಬೇಕು ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಅವರು ಈ ಹಿಂದೆ ಆರ್ ಸಿಬಿಯ ಸದಸ್ಯರಾಗಿದ್ದವರು. ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೂಡು ಸೇರಿಕೊಂಡಿದ್ದಾರೆ. ಗೇಲ್ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಬಾಲ್ ಗಳಲ್ಲಿ 63 ರನ್ ಸಿಡಿಸಿದರೆ ರಾಹುಲ್ ಮತ್ತೊಮ್ಮೆಅದ್ಭುತ ಆಟವಾಡಿದರು.