ನವದೆಹಲಿ: ಭಾರತ ಕ್ರಿಕೆಟ್ ತಂಡದ ಅಂಡರ್-19 ವಿಭಾಗ ವಿಶ್ವಕಪ್ ಗೆದ್ದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಂಡರ್-19 ಕೋಚ್ ರಾಹುಲ್ ದ್ರಾವಿಡ್, ಅಂಡರ್-19 ವಿಶ್ವಕಪ್ ಗೆದ್ದ ತಂಡದಲ್ಲಿರುವ ಸದಸ್ಯರಿಗೆ ಸವಾಲುಗಳು ಇನ್ನಷ್ಟೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ದ್ರಾವಿಡ್, ಇನ್ನೂ ಹಲವು ಸವಾಲುಗಳಿವೆ, ವಿಶ್ವಕಪ್ ಗೆಲ್ಲುವ ಸವಾಲಷ್ಟೇ ಮುಗಿದಿದೆ ಎಂದು ಹೇಳಿದ್ದಾರೆ. ಯುವ ತಂಡಕ್ಕೆ 14-16 ತಿಂಗಳ ಹಿಂದೆಯೇ ತರಬೇತಿ ನೀಡಲು ಪ್ರಾರಂಭಿಸಿದ್ದ ಪ್ರಕ್ರಿಯೆ ನನಗೆ ಸಮಾಧಾನ ತಂದಿದೆ. ಕೇವಲ ವಿಶ್ವಕಪ್ ಅಲ್ಲದೇ ಅಂಡರ್-19 ಆಟಗಾರರನ್ನು ತಯಾರಿ ಮಾಡುವ ಒಟ್ಟಾರೆ ಪ್ರಕ್ರಿಯೆ ನನಗೆ ಸಮಾಧಾನ ತಂದಿದೆ, ನಾವು ಉತ್ತಮವಾದ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಸಹ ಸಿಬ್ಬಂದಿಗಳು ನೀಡಿದ ಸಹಕಾರ, ಗುಣ ಮಟ್ಟದ ಸಿಬ್ಬಂದಿಗಳು ಅತ್ಯುತ್ತಮವಾಗಿದ್ದು ನನಗೆ ಮತ್ತಷ್ಟು ಸಂತಸ ಉಂಟು ಮಾಡಿದೆ, ಆಯ್ಕೆ ಮಾಡುವವರು, ಎನ್ ಸಿಎ ಸಹ ಅತ್ಯುತ್ತಮವಾದ ಟೀಂ ವರ್ಕ್ ಮಾಡಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.