ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿ ತಂಡಕ್ಕೆ ಅಮೋಘ ಗೆಲುವು ತಂದಿತ್ತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕೋಚ್ ರವಿಶಾಸ್ತ್ರಿ ಮುಕ್ತಕಂಠದಿಂದ ಶ್ಲಾಘಿಸಿದ್ದು, ಕೊಹ್ಲಿ ಬಣ್ಣನೆಗೆ ಹೊಸ ನಿಘಂಟು ಬೇಕು ಎಂದು ಹೇಳಿದ್ದಾರೆ.
ಸೆಂಚೂರಿಯನ್ ನಲ್ಲಿ ನಡೆದ ಟೂರ್ನಿಯ ಆರನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊಹ್ಲಿ, ಅಜೇಯ 129 ರನ್ ಗಳಿಸಿ ತಂಡಕ್ಕೆ 8 ವಿಕೆಟ್ ಭರ್ಜರಿ ಜಯ ತಂದಿತ್ತಿದ್ದರು. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನದ ಕುರಿತು ಮಾತನಾಡಿದ ಕೋಚ್ ರವಿಶಾಸ್ತ್ರಿ, ಕೊಹ್ಲಿ ಬ್ಯಾಟಿಂಗ್ ಕಲೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರವಿಶಾಸ್ತ್ರಿ, ಬಹುಶಃ ನೀವು ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಕುರಿತು ಬರೆಯಲು ಹೊಸ ಪದಗಳಿಗಾಗಿ ಹುಡುಕುತ್ತಿರಬಹುದು. ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಬಣ್ಣಿಸಲು ಹೊಸ ಆಕ್ಸ್ ಫರ್ಡ್ ನಿಘಂಟು ಬೇಕು ಎಂದೆನಿಸುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಅಂತೆಯೇ ಕೊಹ್ಲಿ ಬ್ಯಾಟಿಂಗ್ ನಿಂದಾಗಿ ತಂಡದ ಮೇಲಾಗಿರುವ ಪರಿಣಾಮದ ಕುರಿತು ಮಾತನಾಡಿದ ಶಾಸ್ತ್ರಿ ಕೊಹ್ಲಿ ಬ್ಯಾಟಿಂಗ್ ನಿಂದಾಗಿ ತಂಡದ ಇತರೆ ಸದಸ್ಯರು ತುಂಬಾ ಸ್ಪೂರ್ತಿ ಪಡೆದಿದ್ದಾರೆ. 6 ಪಂದ್ಯಗಳಲ್ಲಿ 500 ಅಧಿಕ ರನ್ ಗಳಿಸಿರುವುದೇ ಕೊಹ್ಲಿ ಪ್ರದರ್ಶನವನ್ನು ತೋರುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ.
ನಿನ್ನೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಗಳ ಅಂತರದಲ್ಲಿ ಜಯಿಸಿದ್ದು ಮಾತ್ರವಲ್ಲದೇ 6 ಪಂದ್ಯಗಳ ಸರಣಿಯನ್ನು 5-1 ಅಂತರದಲ್ಲಿ ಮಣಿಸಿತ್ತು. ಅಲ್ಲದೆ ಇದೇ ಟೂರ್ನಿಯಿಂದಲೇ ಭಾರತ ಏಕದಿನ ಕ್ರಿಕೆಟ್ ನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos