ಸುನೀಲ್ ರಮೇಶ್, ಪ್ರಕಾಶ್ ಜಯರಾಮಯ್ಯ, ಬಸಪ್ಪ
ಬೆಂಗಳೂರು: ಅಂಧ ಕ್ರಿಕೆಟ್ ನಲ್ಲಿ 27 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿರುವ ಕನ್ನಡಿಗ ಪ್ರಕಾಶ್ ಜಯರಾಮಯ್ಯ ಅವರು ಐದು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಚನ್ನಪಟ್ಟಣ ಮೂಲದ ಪ್ರಕಾಶ್ ಜಯರಾಮಯ್ಯ ಭಾರತ ಅಂಧರ ಕ್ರಿಕೆಟ್ ತಂಡದ ಉಪ ನಾಯಕರಾಗಿದ್ದು ಕಿತ್ತು ತಿನ್ನುವ ಬಡತನ ನಡುವೆ ಅರಳಿದ ಮಹಾನ್ ಆಟಗಾರ. ಅಂತಹ ಆಟಗಾರ ಕಳೆದ 8 ವರ್ಷದಿಂದ ಸರ್ಕಾರಿ ಕೆಲಸಕ್ಕಾಗಿ ಹೆಣಗಾಡುತ್ತಿದ್ದಾರೆ. ಎರಡು ಬಾರಿ ವಿಶ್ವಕಪ್ ಚಾಂಪಿಯನ್ ತಂಡ ಭಾರತವನ್ನು ಪ್ರತಿನಿಧಿಸಿದ್ದ ಪ್ರಕಾಸ್ ಜಯರಾಮಯ್ಯ ಅವರಿಗೆ 2010ರಿಂದ ಭರವಸೆ ಮತ್ತು ಔಪಚಾರಿಕ ಅಭಿನಂದನೆಗಳು ಹೊರತುಪಡಿಸಿ ಮತ್ತೇನು ಸಿಕ್ಕಿಲ್ಲ. ವಿಶ್ವಕಪ್ ಗೆದ್ದು ಬಂದಾಗಲೆಲ್ಲಾ ಸಚಿವರು ಸಾರ್ವಜನಿಕವಾಗಿ ಪ್ರಕಟಣೆಯನ್ನು ಮಾಡುತ್ತಾರೆ. ಆದರೆ ಕೆಲಸ ಕೇಳಲು ಹೋದರೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಪಲಾಯನ ಮಾಡುತ್ತಾರೆ ಎಂದು ಪ್ರಕಾಶ್ ಜಯರಾಮಯ್ಯ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರೂ ನಮ್ಮನ್ನು ಅಭಿನಂದಿಸುತ್ತಾರೆ ಆದರೆ ನಮ್ಮ ಕುಟುಂಬಗಳನ್ನು ನಡೆಸಲು ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದರು. ಬೆಂಗಳೂರಿನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಗೆದ್ದಾಗ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಕರ್ನಾಟಕದ ಆಟಗಾರರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಸಾಧ್ಯವಾಗಿಲ್ಲ. ಕೇರಳ ಆಟಗಾರರಿಗೆ ಅಲ್ಲಿನ ಸರ್ಕಾರ ಸರ್ಕಾರಿ ಕೆಲಸ ನೀಡಿದೆ. ಪಾಕಿಸ್ತಾನದ ಆಟಗಾರರಿಗೂ ಅಲ್ಲಿನ ಸರ್ಕಾರ ಕೆಲಸವನ್ನು ನೀಡಿದೆ. ಆದರೆ ನಮ್ಮ ಸರ್ಕಾರ ಮಾತ್ರ ಯಾಕೋ ಮೀನಾಮೇಷ ಎಣಿಸುತ್ತಿದೆ ಎಂದು ಪ್ರಕಾಶ್ ಜಯರಾಮಯ್ಯ ಅವರು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಗುಡ್ಡದೂರು ಮೂಲದ ಸುನೀಲ್ ರಮೇಶ್ ಸಹ ಅಂಧರ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 67 ಎಸೆತಗಳಲ್ಲಿ 93 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ ಬೆಳಗಾವಿಯ ಬಸಪ್ಪ ವೊದ್ಗಲ್ ಸಹ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದಾರೆ ಎಂದು ಜಯರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos