ಡಬ್ಲಿನ್: ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಎರಡೂ ಟಿ20 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಆತ್ಮ ವಿಶ್ವಾಸದಿಂದ ಬೀಗುತ್ತಿದ್ದು, ಇಂಗ್ಲೆಂಡ್ ಪ್ರವಾಸಕ್ಕೆ ತಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.
ಅತ್ತ ಡಬ್ಲಿನ್ ನಲ್ಲಿ ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದ ಜಯದ ಬಳಿಕ ಮಾತನಾಡಿದ ಕೊಹ್ಲಿ, ಇಂಗ್ಲೆಂಡ್ ಪ್ರವಾಸಕ್ಕೆ ನಾವು ಸಜ್ಜಾಗಿದ್ದು, ಇಂಗ್ಲೆಂಡ್ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂದು ಹೇಳಿದ್ದಾರೆ. ಇದೇ ಮಂಗಳವಾರದಿಂದ ಭಾರತ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಾಡಲಿದೆ.
ಈ ಪ್ರವಾಸಕ್ಕೂ ಮುನ್ನ ಮಾತನಾಡಿರುವ ವಿರಾಟ್ ಕೊಹ್ಲಿ. ಇಂಗ್ಲೆಂಡ್ ಪ್ರವಾಸಕ್ಕೆ ನಾವು ಸಜ್ಜಾಗಿದ್ದು, ಯಾವುದೇ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸುವ ವಿಶ್ವಾಸವಿದೆ. ತಂಡ ಬ್ಯಾಟ್ಸಮನ್ ಗಳು ಫಾರ್ಮ್ ನಲ್ಲಿರುವುದು ಖುಷಿಯ ವಿಚಾರ ಅಂತೆಯೇ ಬೌಲರ್ ಗಳೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಉತ್ತಮ ತಂಡದ ಆಯ್ಕೆ ಕಷ್ಟವಾಗುತ್ತಿದೆ. ಖುಷಿಯ ವಿಚಾರವೆಂದರೆ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿದ್ದಾರೆ. ಸಣ್ಣ ಅವಕಾಶವನ್ನೂ ಕೂಡ ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿದ್ದಾರೆ. ನಮ್ಮ ಬೆಂಚ್ ಸ್ಟ್ರೆಂಥ್ ಹೆಚ್ಚಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಲೆಕ್ಕಾಚಾರ ತಲೆಕೆಳಗಾಗಲಿದೆ
ಇದೇ ವೇಳೆ ಇಂಗ್ಲೆಂಡ್ ಕುರಿತು ಮಾತನಾಡಿದ ಕೊಹ್ಲಿ ನಾವು ನಮ್ಮ ಸಾಮರ್ಥ್ಯದ ಆಧಾರದ ಮೇಲೆ ಪ್ರದರ್ಶನ ನೀಡುವತ್ತ ಗಮನ ಕೇಂದ್ರೀಕರಿಸಿದ್ದೇವೆ. ಕಠಿಣ ಪರಿಶ್ರಮ, ಅಭ್ಯಾಸ ನಮ್ಮ ಸಾಮರ್ಥ್ಯವಾಗಿದ್ದು, ಖಂಡಿತಾ ಎದುರಾಳಿ ಯಾರೇ ಆಗಿರಲಿ ಪ್ರಬಲ ಹೋರಾಟ ನೀಡಲಿದ್ದೇವೆ. ಗೆಲುವಿಗಾಗಿ ಹೋರಾಟ ನಡೆಸಲಿದ್ದೇವೆ. ಎದುರಾಳಿ ಯಾರು ಎಂಬುದು ನಮಗೆ ಮುಖ್ಯವಲ್ಲ. ಉತ್ತಮ ಪ್ರದರ್ಶನವೇ ನಮ್ಮ ಗುರಿ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಐಪಿಎಲ್ ನಲ್ಲಿ 21 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಬಾಗಿಲು ತಟ್ಟಿದ್ದ ಸಿದ್ಧಾರ್ಥ್ ಕೌಲ್ ಶುಕ್ರವಾರದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ20 ಕಿಕ್ರೆಟ್ ಗೆ ಪದಾರ್ಪಣೆ ಮಾಡಿದರು. ಅಲ್ಲದೆ ತಮ್ಮ ಎರಡನೇ ಓವರ್ ನಲ್ಲೇ ವಿಕೆಟ್ ಪಡೆದು ಮಿಂಚಿದರು. ಅಂತೆಯೇ ಯಜುವೇಂದ್ರ ಚಾಹಲ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos