ನವದೆಹಲಿ: ಬಿಸಿಸಿಐನ ಒಂದು ರಾಜ್ಯ- ಒಂದು ಮತ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರ ಪ್ರಕಟಿಸಿರುವ ಸುಪ್ರೀಂ ಕೋರ್ಟ್ ನಿರ್ಣಯ ಮರು ಪರಿಶೀಲನೆ ಮಾಡವುದಾಗಿ ಹೇಳಿದೆ.
ಈ ಬಗ್ಗೆ ಮಂಗಳವಾರ ನಡೆದ ವಿಚಾರಣೆಯಲ್ಲಿ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ರಾಜ್ಯ ಕ್ರಿಕೆಟ್ ಮಂಡಳಿಗಳ ಪಾತ್ರವನ್ನು ನಗಣ್ಯ ಮಾಡದ ಸುಪ್ರೀಂ ಕೋರ್ಟ್ ನಿರ್ಣಯವನ್ನು ಶೀಘ್ರ ಮರುಪರಿಶೀಲನೆ ಮಾಡುವುದಾಗಿ ಹೇಳಿದೆ. ಇದೇ ವೇಳೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಖ್ಯೆಯನ್ನೂ ಕೂಡ ಮೂರಕ್ಕೆ ಇಳಿಸಲು ಸುಪ್ರೀಂ ಕೋರ್ಟ್ ಮುಂದಾಗಿದ್ದು, ಇದಲ್ಲದೇ ಆಯ್ಕೆ ಸಮಿತಿಗೆ ಆಯ್ಕೆಯಾಗುವವರು ಕಡ್ಡಾಯವಾಗಿ ಟೆಸ್ಟ್ ಕ್ರಿಕೆಟ್ ಆಡಿರಬೇಕು ಎಂಬ ನಿರ್ಧಾರವನ್ನೂ ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಇದೇ ವೇಳೆ ಬಿಸಿಸಿಐನ ನಿರ್ವಹಣಾ ಮಂಡಳಿ ಸಿದ್ಧವಾಗುವವರೆಗೂ ಯಾವುದೇ ರಾಜ್ಯ ಕ್ರಿಕೆಟ್ ಮಂಡಳಿಗಳೂ ಚುನಾವಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ 7ನೇ ಸ್ಥಿತಿಗತಿ ವರದಿಯಲ್ಲಿ ಹೇಳಿದೆ. ಇನ್ನು ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿದ್ದ ಬಿಸಿಸಿಐನ ನಿರ್ವಾಹಕ ಸಮಿತಿಯ ಸದಸ್ಯರಾದ ವಿನೋದ್ ರಾಯ್ ಮತ್ತು ಡಯಾನ ಎಡುಲ್ಜಿ ಅವರು, ಬಿಸಿಸಿಐ ಪದಾಧಿಕಾರಿಗಳ ಚುನಾವಣೆಗೆ ಶಿಫಾರಸ್ಸು ಮಾಡಿತ್ತು. ಹಾಲಿ ಇರುವ ನಿಯೋಜಿತ ಅಧ್ಯಕ್ಷ ಸಿಕೆ ಖನ್ನಾ, ನಿಯೋಜಿತ ಕಾರ್ಯದರ್ಶಿ ಅಮಿತಾಬ್ ಚೌದರಿ, ಖಜಾಂಚಿ ಅನಿರುದ್ಧ್ ಚೌದರಿ ಮತ್ತಿತರರ ಬದಲಾವಣೆಗೆ ನಿರ್ವಾಹಕ ಸಮಿತಿ ಮುಂದಾಗಿತ್ತು. ಆದರೆ ಈ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದೆ.
ಅಂತೆಯೇ ವಾರ್ಷಿಕ ಸಾಮಾನ್ಯಸಭೆ ಕುರಿತಂತೆ ತನ್ನ ಅಭಿಪ್ರಾಯ ನೀಡಿರುವ ಸಿಒಎ, ಬಿಸಿಸಿಐನ ಪದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆಯನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲೇ ಪ್ರತೀ ವರ್ಷ ನಡೆಸಬೇಕು ಎಂದು ಹೇಳಿತ್ತು. ಲೋಧಾ ಸಮಿತಿಯ ಶಿಫಾರಸ್ಸಿನಂತೆ ಒಂದು ರಾಜ್ಯ ಒಂದು ಮತದ ಹಕ್ಕಿನಡಿಯಲ್ಲಿ ಚುನಾವಣೆ ನಡೆಸಬೇಕು ಎಂದು ಸಿಒಎ ತನ್ನ ವಸ್ತುಸ್ಥಿತಿ ವರದಿಯಲ್ಲಿ ಹೇಳಿತ್ತು. ಪ್ರಮುಖವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಮಂಡಳಿಗಳು ಬಿಸಿಸಿಐನಲ್ಲಿ ಮತದಾನದ ಹಕ್ಕೂ ಒಳಗೊಂಡಂತೆ ಎಲ್ಲ ರೀತಿಯಹಕ್ಕನ್ನೂ ಹೊಂದಿರುವುದನ್ನು ಸಿಒಎ ವಿರೋಧಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos