ದುಬೈ: ಭಾರತ ಏಕದಿನ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ನಾಯಕತ್ವ ಗುಣಗಳಿಗೆ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಫುಲ್ ಫಿದಾ ಆಗಿದ್ದು, ರೋಹಿತ್ ನಾಯಕತ್ವವನ್ನು ಕಂಠಪೂರ್ತಿ ಶ್ಲಾಘಿಸಿದ್ದಾರೆ.
ಪ್ರಮುಖವಾಗಿ ನಿನ್ನೆ ದುಬೈನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ನಾಯಕತ್ವ ನನ್ನನ್ನು ಯಾವಾಗಲೂ ಪ್ರಭಾವಿತಗೊಳಿಸುತ್ತದೆ. ತಮಗೆ ಅವಕಾಶ ಸಿಕ್ಕಾಗಲೆಲ್ಲ ರೋಹಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವವನ್ನು ನಾನು ಐಪಿಎಲ್ ನಿಂದಲೂ ಗಮನಿಸುತ್ತಿದ್ದೇನೆ. ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ನಿಭಾಯಿಸಿದ ಪರಿಯನ್ನು ಹತ್ತಿರದಿಂದ ನಾನು ನೋಡಿದ್ದು ಅದೇ ರೀತಿಯ ನಾಯಕತ್ವ ಈಗ ಏಷ್ಯಾ ಕಪ್ ನಲ್ಲೂ ಮುಂದುವರೆದಿದೆ. ರೋಹಿತ್ ಎಂತಹುದೇ ಪರಿಸ್ಥಿತಿಗೂ ಹೊಂದಿಕೊಂಡು ಅಡುವ ಮತ್ತು ನಾಯಕನಾಗಿ ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸುವ ಗುಣ ಹೊಂದಿದ್ದಾರೆ. ತಮಗೆ ಅವಕಾಶ ಸಿಕ್ಕಾಗಲೆಲ್ಲ ರೋಹಿತ್ ತಾವೊಬ್ಬ ಅತ್ಯುತ್ತಮ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ತಮ್ಮ ನಾಯಕತ್ವ ಮತ್ತು ತಮ್ಮ ವೈಯುಕ್ತಿಕ ಪ್ರದರ್ಶನವನ್ನು ಒಂದು ಮಾಡದ ರೋಹಿತ್ ವೈಯುಕ್ತಿಕವಾಗಿಯೂ ಉತ್ತಮ ರನ್ ಕಲೆಹಾಕುತ್ತಿದ್ದಾರೆ. ಅವರ ಮೇಲಿರುವ ಜವಾಬ್ಜಾರಿಯೇ ಅವರನ್ನು ಇನ್ನಷ್ಟು ಉತ್ತಮಗೊಳಿಸುತ್ತಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಇದೇ ವೇಳೆ ರವೀಂದ್ರ ಜಡೇಜಾ ಕುರಿತು ಮಾತನಾಡಿದ ಗವಾಸ್ಕರ್, ಜಡೇಜಾ ಅತ್ಯುತ್ತಮವಾಗಿ ಏಕದಿನಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಅವರ ಪ್ರದರ್ಶನ ಅವರು ತಂಡಕ್ಕೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಓರ್ವ ಅಲ್ ರೌಂಡರ್ ಅಗಿ ಜಡೇಜಾ ತಂಡದಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸುತ್ತಾರೆ ಎಂದು ಹೇಳಿದರು.
ಇನ್ನು ನಾಯಕರಾಗಿ ರೋಹಿತ್ ಶರ್ಮಾ ಬಹುತೇಕ ಸಿಹಿಯನ್ನೇ ಉಂಡಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ 2-1 ಅಂತರದಲ್ಲಿ ಏಕದಿನ ಸರಣಿ ಜಯ ಮತ್ತು 3-0 ಅಂತರದ ಟಿ20 ಸರಣಿ ಜಯ ಕಂಡಿತ್ತು. ಬಳಿಕ ನಡೆದ ನಿಡಹಾಸ್ ಟ್ರೋಫಿ ಸರಣಿ ಜಯ. ಬಾಂಗ್ಲಾದೇಶ ಪ್ರವಾಸದ ಸರಣಿ ಜಯಗಳು ರೋಹಿತ್ ಶರ್ಮಾ ಗೆಲುವಿನ ಪಟ್ಟಿಗೆ ಸೇರಿತು. ಇದೀಗ ಏಷ್ಯಾ ಕಪ್ ನಲ್ಲೂ ರೋಹಿತ್ ಗೆಲುವಿನ ಸರಣಿ ಮುಂದುವರೆದಿದ್ದು, ಪ್ರಸ್ತುತ ಭಾರತ ಆಡಿರುವ ಮೂರೂ ಪಂದ್ಯಗಳಲ್ಲಿಯೂ ಜಯ ಗಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos