ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಿಂದ ತಮ್ಮನ್ನ ಕೈ ಬಿಟ್ಟಿದ್ದಕ್ಕೆ ಅಂಬಾಟಿ ರಾಯುಡು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಹೌದು.. ಬಹು ನಿರೀಕ್ಷಿತ ಐಸಿಸಿ ವಿಶ್ವಕಪ್ ಟೂರ್ನಿಗೆ ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರನ್ನು ಘೋಷಣೆ ಮಾಡಲಾಗಿದ್ದು, ತಂಡದಿಂದ ಅಂಬಾಟಿ ರಾಯುಡು ಅವರನ್ನು ಕೈ ಬಿಡಲಾಗಿತ್ತು. ಆದರೆ ಈ ಹಿಂದಿನ ಆಸಿಸ್ ವಿರುದ್ಧ ಸರಣಿ ಮತ್ತು ಹಾಲಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಅಂಬಾಟಿ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವ ಕುರಿತು ವಿಶ್ವಾಸದಲ್ಲಿದ್ದರು. ಆದರೆ ಅಂಬಾಟಿ ರಾಯುಡುಗೆ ಸ್ಥಾನ ನೀಡಲಾಗಿಲ್ಲ.
ಇದೀಗ ಆಯ್ಕೆ ಸಮಿತಿ ವಿರುದ್ಧ ಅಂಬಾಟಿ ರಾಯುಡು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ. 'ಈಗಷ್ಟೇ ವಿಶ್ವಕಪ್ ಟೂರ್ನಿ ನೋಡೋದಕ್ಕೆ 3D ಗ್ಲಾಸ್( ಕನ್ನಡಕ) ಆರ್ಡರ್ ಮಾಡಿದ್ದೇನೆ ಎಂದು ರಾಯುಡು ಟ್ವೀಟ್ ಮಾಡಿದ್ದಾರೆ. ರಾಯುಡು ಅವರ ಈ ಟ್ವಿಟ್, ತಮ್ಮ ಸ್ಥಾನದಲ್ಲಿ ಆಯ್ಕೆಯಾದ ಆಟಗಾರ ವಿಶ್ವಕಪ್ನಲ್ಲಿ ಹೇಗೆ ಆಡ್ತಾನೋ ನಾನು ನೋಡ್ತೀನಿ ಎನ್ನುವಂತಿದೆ.
ಬಿಸಿಸಿಐ ಪ್ರಕಟಿಸಿರುವ 15 ಆಟಗಾರರ ಟೀಂ ಇಂಡಿಯಾದಲ್ಲಿ ರಾಯುಡುಗೆ ಅವಕಾಶ ಸಿಕ್ಕಿಲ್ಲ.ಬ್ಯಾಟಿಂಗ್ ವಿಭಾಗದ ನಂ.4ರ ಸ್ಲಾಟ್ ಗಾಗಿ ರಾಯುಡು ಹಾಗು ರಾಹುಲ್ ನಡುವೆ ಸಾಕಷ್ಟು ಸ್ಪರ್ಧೆ ಇತ್ತು.ಈ ಹಿಂದಿನ ಕೆಲ ಏಕದಿನ ಸರಣಿಗಳಲ್ಲಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಾಹುಲ್ ರಿಂದ ಅಂತಹ ಹೇಳಿಕೊಳ್ಳುವ ಪ್ರದರ್ಶನ ಬಂದಿರಲಿಲ್ಲ. ಇದೇ ಕಾರಣಕ್ಕೆ ಅಂಬಾಟಿ ರಾಯುಡು ತಂಡದಲ್ಲಿ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದರು. ಆದರೆ ಆಯ್ಕೆ ಸಮಿತಿ ರಾಹುಲ್ ಗೆ ಮಣೆ ಹಾಕಿದೆ.
ಕ್ರಿಕೆಟ್ ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಬ್ಯಾಕಪ್ ಓಪನರ್ ಹಾಗು ಮಿಡ್ಲ್ ಆರ್ಡರ್ ನಲ್ಲೂ, ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ರಾಹುಲ್ ಗೆ ಚಾನ್ಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಸದ್ಯ ನಡೆಯುತ್ತಿರುವ ಐಪಿಎಲ್ 12ರಲ್ಲಿ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣದಿಂದ ರಾಯುಡರನ್ನ ಹಿಂದಿಕ್ಕಿ, ವಿಶ್ವಕಪ್ ತಂಡದಲ್ಲಿ ರಾಹುಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos