ಬೆಂಗಳೂರು: ಪ್ರಸಕ್ತ ಐಪಿಎಲ್ ಟಿ-20 ಆವೃತ್ತಿಯ ಆರಂಭದಲ್ಲಿ ಸತತ ಆರು ಪಂದ್ಯಗಳಲ್ಲಿನ ಸೋಲು ತಂಡದ ಆಟಗಾರರಿಗೆ ನೋವು ತಂದಿತ್ತು. ಏ.13 ರಂದು ಮೊಹಾಲಿಯಲ್ಲಿ ನಡೆದ ಪಂದ್ಯದ ಬಳಿಕ ಆಟಗಾರರ ಮುಖದಲ್ಲಿ ಹೊಸ ಚೈತನ್ಯ ಮೂಡಿಸಿತ್ತು ಎಂದು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.
ಬುಧವಾರ ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 17 ರನ್ಗಳಿಂದ ಜಯ ಸಾಧಿಸಿದ ಬಳಿಕ ಮಾತನಾಡಿದ ಅವರು, " ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದ್ದೇವೆ. ಆದರೆ, ಕೊನೆಯ ಐದೂ ಪಂದ್ಯಗಳಲ್ಲಿಯೂ ಗೆಲುವು ಪಡೆಯಬೇಕಾಗಿತ್ತು. ಕ್ರಿಕೆಟ್ ಅನ್ನು ಖುಷಿಯಾಗಿ ಆಡುತ್ತಿದ್ದೇವೆ. ಕಳೆದ ರಾತ್ರಿ ನಡೆದ ಪಂದ್ಯ ಇದಕ್ಕೆ ಒಂದು ಉದಾಹರಣೆ. ನಮ್ಮ ತಂಡ ಬಲಿಷ್ಟವಾಗಿದ್ದು, ಒಂದು ತಂಡವಾಗಿ ಉತ್ತಮ ಕ್ರಿಕೆಟ್ ಆಡುವುದು ನಮ್ಮ ಗುರಿ" ಎಂದರು.
"ಆರ್ಸಿಬಿ 9ನೇ ಓವರ್ನಲ್ಲಿ 81 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಎ.ಬಿ ಡಿವಿಲಿಯರ್ಸ್ ಹಾಗೂ ಮಾರ್ಕುಸ್ ಸ್ಟೋಯಿನಿಸ್ ಅವರು ತಂಡಕ್ಕೆ ಆಸರೆಯಾದರು. ಈ ಜೋಡಿ ಮುರಿಯದ ಐದನೇ ವಿಕೆಟ್ಗೆ 121 ರನ್ ಜತೆಯಾಟ ತಂಡದ ಮೊತ್ತ 200ರ ಗಡಿ ದಾಟಲು ಸಹಾಯವಾಯಿತು. ಈ ಜೋಡಿ ಪ್ರದರ್ಶನದ ರೀತಿ ಪಂದ್ಯದ ನಿರ್ಣಾಯಕ ಅಂಶವಾಗಿದೆ" ಎಂದು ಕೊಹ್ಲಿ ಶ್ಲಾಘಿಸಿದರು.
"ಮುಖ್ಯವಾಗಿ ನಾವು ಒತ್ತಡದಲ್ಲಿ ಆಡುವುದಿಲ್ಲ. ಜಾಗತಿಕ ಮಟ್ಟದಲ್ಲಿ ಆಡುವ ಸಹಜ ಕ್ರಿಕೆಟ್ ಆಡಲು ನಾವು ಬಯಸುತ್ತೇವೆ. ತಂಡದಲ್ಲಿ 6 ರಿಂದ 7 ಬೌಲರ್ಗಳ ಆಯ್ಕೆ ಇದ್ದರೆ ಅದು ಐಷಾರಾಮಿಯಾಗಿರುತ್ತದೆ. ಯಾರೂ ಉತ್ತಮ ಬೌಲಿಂಗ್ ಪ್ರದರ್ಶನ ತೋರುವವರಿಗೆ ತಂಡದಲ್ಲಿ ಮಣೆ ಹಾಕುತ್ತೇನೆ. ಕಳೆದ ರಾತ್ರಿ ತಂಡದಲ್ಲಿ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ" ಎಂದು ಬೌಲಿಂಗ್ ವಿಭಾಗವನ್ನು ನಾಯಕ ಕೊಂಡಾಡಿದರು.
ಆರ್ಸಿಬಿ ಆಡಿರುವ ಒಟ್ಟು 11 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ್ದು, ಇನ್ನುಳಿದ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 8 ಅಂಕಗಳೊಂದಿಗೆ ಇದೀಗ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು ಏಳನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಏ.28 ರಂದು ದೆಹಲಿಯ ಫೀರೋಜ್ ಶಾ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos