ಕೊಲಂಬೋ: ಸರಣಿ ಗೆದ್ದ ಬಳಿಕ ಧೋನಿ ಮತ್ತು ಅವರ ತಂಡ ಈ ಹಿಂದೆ ಮೈದಾನದಲ್ಲೇ ಬೈಕ್ ಓಡಿಸಿ ಸಂಭ್ರಮಿಸಿದ್ದು ನೆನಪಿದೆ ಅಲ್ವೇ.. ಆದರೆ ಇಂತಹುದೇ ಸಂಭ್ರಮ ಮಾಡಲು ಹೋಗಿ ಶ್ರೀಲಂಕಾದ ಕ್ರಿಕೆಟಿಗ ಎಡವಟ್ಟು ಮಾಡಿಕೊಂಡಿದ್ದಾರೆ.
ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ಘಟನೆ ನಡೆದ ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 122 ರನ್ ಗಳ ಅಂತರದಲ್ಲಿ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು. ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡ 3-0 ಇಂದ ಏಕದಿನ ಸರಣಿಯನ್ನು ಗೆದ್ದಿತ್ತು. ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸರಣಿ ಗೆಲುವಿನ ಸಂಭ್ರಮದಲ್ಲಿದ್ದ ಲಂಕಾದ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಸಿಕ್ಕ ಬೈಕ್ ಅನ್ನು ಲಂಕಾದ ಆಟಗಾರ ಕುಶಾಲ್ ಮೆಂಡಿಸ್ ಮೈದಾನದಲ್ಲೇ ಬೈಕ್ ಚಾಲನೆ ಮಾಡಿದರು. ಈ ವೇಳೆ ಮೈದಾನದೊಳಗೆ ಬೈಕ್ ಸ್ಕಿಡ್ ಆಗಿದೆ. ಮೈದಾನದ ಹುಲ್ಲು ಹಾಸಿನ ಮೇಲೆ ತೇವಾಂಶವಿದ್ದ ಕಾರಣ ಬೈಕ್ ಜಾರಿ ಬಿದ್ದಿದೆ. ಅಂತೆಯೇ ಬೈಕ್ ಚಾಲನೆ ಮಾಡುತ್ತಿದ್ದ ಕುಶಾಲ್ ಮೆಂಡಿಸ್ ಮತ್ತು ಹಿಂಬದಿಯಲ್ಲಿದ್ದ ಮತ್ತೋರ್ವ ಆಟಗಾರ ಕೂಡ ಕೆಳಗೆ ಬಿದ್ದಿದ್ದಾರೆ. ಕೂಡಲೇ ತಕ್ಷಣ ಸ್ಥಳದಲ್ಲಿದ್ದ ಕ್ರೀಡಾಂಗಣದ ಸಿಬ್ಬಂದಿ ಮೆಂಡಿಸ್ ನೆರವಿಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಮೆಂಡಿಸ್ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ವಿಶ್ವಕಪ್ನಲ್ಲಿ ಕಳಪೆ ನಿರ್ವಹಣೆ ತೋರಿದ್ದ ಶ್ರೀಲಂಕಾ ತಂಡ ತವರಿನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಸರಣಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ಸರಣಿ ಜಯ ದಾಖಲಿಸಿದೆ. ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಲಸಿತ್ ಮಾಲಿಂಗಾ ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.