ಕ್ರಿಕೆಟ್

ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದ ದೀಪಕ್‌ ಚಾಹರ್‌, ನವದೀಪ್‌ ಸೈನಿಗೆ ಅವಕಾಶ

Srinivasamurthy VN

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಖುಷಿಯಲ್ಲಿರುವ ಟೀಮ್ ಇಂಡಿಯಾಗಿ ಆಘಾತ ಉಂಟಾಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಸಮಯೋಜಿತವಾಗಿ ಬೌಲಿಂಗ್‌ ನಿರ್ವಹಿಸಿದ್ದ ದೀಪಕ್ ಚಾಹರ್ ಗಾಯದಿಂದಾಗಿ ಮೂರನೇ ಏಕದಿನ ಪಂದ್ಯದಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ನವದೀಪ್‌ ಸೈನಿಗೆ ಅವಕಾಶ ಕಲ್ಪಿಸಲಾಗಿದೆ.

ಬುಧವಾರ ವಿಶಾಖಪಟ್ಟಣಂದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ದೀಪಕ್ ಚಾಹರ್‌ ಅವರ ಕೆಳ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ನಂತರ, ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ನಿರ್ವಹಣೆಗೆ ತೆಗೆದುಕೊಂಡಿದ್ದು, ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಅಗತ್ಯವಿದೆ. ಹಾಗಾಗಿ, ಅವರು ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಚೆನ್ನೈನಲ್ಲಿ  ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಮೊದಲ ಪಂದ್ಯದಲ್ಲಿ ದೀಪಕ್ ಚಾಹರ್‌ 10 ಓವರ್‌ಗಳಿಗೆ 48 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು. ನಂತರ, ವಿಶಾಖಪಟ್ಟಣಂ ಪಂದ್ಯದಲ್ಲಿ 10 ಓವರ್‌ಗಳಿಗೂ ವಿಕೆಟ್‌ ಪಡೆಯದಿದ್ದರೂ 44 ರನ್‌ಗಳಿಗೆ ಎದುರಾಳಿಗಳನ್ನು ನಿಯಂತ್ರಿಸಿದ್ದರು. ಇವರ ಅನುಪಸ್ಥಿತಿಯಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್‌ ಅವರ ಜತೆಗೆ, ನವದೀಪ್ ಸೈನಿ ಸೇರ್ಪಡೆಯಾಗಲಿದ್ದಾರೆ.

ಮೂರನೇ ಏಕದಿನ ಪಂದ್ಯ ಡಿ.22 ರಂದು ಕಟಕ್‌ನಲ್ಲಿ ನಡೆಯಲಿದೆ. ಭಾರತ ತಂಡ (3ನೇ ಪಂದ್ಯ):  ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ, ಮಯಾಂಕ್ ಅಗರ್ವಾಲ್, ಕೆ.ಎಲ್‌ ರಾಹುಲ್, ಶ್ರೇಯಸ್‌ ಅಯ್ಯರ್, ಮನೀಶ್‌ ಪಾಂಡೆ, ರಿಷಭ್ ಪಂತ್(ವಿ.ಕೀ), ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್‌ ಶಮಿ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

SCROLL FOR NEXT