ಬೆಂಗಳೂರು: ಹಾಲಿ ರಣಜಿ ಟ್ರೋಫಿಯಲ್ಲಿ ಫೈನಲ್ ಗೇರುವ ಕರ್ನಾಟಕದ ಆಸೆಗೆ ಸೌರಾಷ್ಟ್ರ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ತಮ್ಮ ಮೋಸದಾಟದ ಮೂಲಕ ತಣ್ಣೀರೆರಚಿದ್ದಾರೆ. ಅಲ್ಲದೆ ಅಭಿಮಾನಿಗಳಿಂದ ಮೋಸಗಾರ ಎಂದು ಟೀಕಿಸಿಕೊಂಡಿದ್ದಾರೆ ಪೂಜಾರ..
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಣ ಸೆಮಿ ಫೈನಲ್ ಕದನದಲ್ಲಿ ಪೂಜಾರರನ್ನು ಅಭಿಮಾನಿಗಳು 'ಚೀಟರ್ ಚೀಟರ್' ಎಂದು ಜೋರಾಗಿ ಕೂಗಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೂ ಇದೆ…
ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಹಾಗೂ 2ನೇ ದಿ ವಾಲ್ ಎಂದೇ ಖ್ಯಾತಿ ಆಗಿರುವ ಚೇತೇಶ್ವರ್ ಪೂಜಾರ ಭಾರತ ತಂಡ ಸಂಕಷ್ಟದಲ್ಲಿದ್ದಾಗ ಏಕಾಂಗಿಯಾಗಿ ನಿಂತು ಹೋರಾಡಿ ಅದೆಷ್ಟೊಬಾರಿ ನೆರವಾಗಿದ್ದಾರೆ. ಇದರಿಂದಲೇ ಪೂಜಾರ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ, ಈಗ ಅದೆ ಅಭಿಮಾನಿಗಳು ಪೂಜಾರ ವಿರುದ್ಧ ಗರಂ ಆಗಿದ್ದಾರೆ. ಅಭಿಮಾನಿಗಳ ಈ ಪರಿ ಆಕ್ರೋಶಕ್ಕೆ ಪೂಜಾರ ತುತ್ತಾಗಲು ಕಾರಣವಾಗಿದ್ದು ಅವರ ಮೋಸದಾಟ..
ಹೌದು.. ಕರ್ನಾಟಕ ನೀಡಿದ್ದ 279 ರನ್ಗಳ ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡ ಆರಂಭದಲ್ಲೇ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಕ್ರೀಸ್ ಕಚ್ಚಿ ನಿಂತ ಪೂಜಾರ ತಂಡಕ್ಕೆ ಆಸರೆಯಾದರು. ಆದರೆ, ವಿನಯ್ ಕುಮಾರ್ ಓವರ್ನಲ್ಲಿ ಪೂಜಾರ ಅವರು ಚೆಂಡನ್ನು ಕಟ್ ಮಾಡಲು ಹೊರಟರು. ಈವೇಳೆ ಚೆಂಡು ಹಿಂದೆ ನುಗ್ಗಿ ವಿಕೆಟ್ ಕೀಪರ್ ಶ್ರೀನಿವಾಸ್ ಕೈಸೇರಿತು. ರಾಜ್ಯ ತಂಡದ ಆಟಗಾರರು ಕುಣಿದು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಆದರೆ, ಅಂಪೈರ್ ಖಾಲೀದ್ ಹುಸೈನ್ ನಾಟೌಟ್ ತೀರ್ಪು ನೀಡಿದರು. ವಿಡಿಯೋದಲ್ಲಿ ಪೂಜಾರ ಔಟ್ ಎಂಬುದು ಸ್ಪಷ್ಟವಾಗಿ ಗೋಚಿಸುತ್ತದೆ. ಅಲ್ಲದೆ ತಾನು ಔಟ್ ಎಂದು ಪೂಜಾರಾಗೂ ತಿಳಿದಿತ್ತು. ಆದರೂ ಅವರು ಪೆವಿಲಿಯನ್ ದಾರಿ ಹಿಡಿಯದೆ ಬ್ಯಾಟಿಂಗ್ ಮುಂದುವರಿಸಿದರು. ಈ ಸಂದರ್ಭ ಅಂಪೈರ್ ಹಾಗೂ ವಿನಯ್ ಕುಮಾರ್ ನಡುವೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆಯಿತು.