ಕ್ರಿಕೆಟ್

ಯಾರಿಗೆ ಸ್ಥಾನ ನೀಡಬೇಕೆಂಬ ಚಿಂತೆ: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ ಮುಂದಕ್ಕೆ!

Vishwanath S
ಮುಂಬೈ: ಆಗಸ್ಟ್ ಮೂರರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಗೆ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಭಾನುವಾರ ನಡೆಸಲು ನಿರ್ಧರಿಸಿದೆ. 
ಎಂ.ಎಸ್.ಕೆ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ವಿಂಡೀಸ್ ವಿರುದ್ಧ ನಡೆಯಲಿರುವ 3 ಟಿ-20, 3 ಏಕದಿನ ಹಾಗೂ 2 ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ. ಈ ಬಗ್ಗೆ ಬಿಸಿಸಿಐ ಶುಕ್ರವಾರ ಪ್ರಕಟಣೆಯನ್ನು ಹೊರಡಿಸಿದ್ದು, ಮುಂಬೈನಲ್ಲಿ ಭಾನುವಾರ ಸಭೆ ನಡೆಸುವುದಾಗಿ ತಿಳಿಸಿದೆ. 
ಸಾಂಪ್ರದಾಯಿಕವಾಗಿ ಬಿಸಿಸಿಐ ಕಾರ್ಯದರ್ಶಿ ನಡೆಸುವ ಟೀಮ್ ಇಂಡಿಯಾದ ತಂಡದ ಆಯ್ಕೆಗೆ ಬ್ರೇಕ್ ಬಿದ್ದಿದ್ದು, ಆಯ್ಕೆ ಸಮಿತಿಯ ಮುಖ್ಯಸ್ಥ ಎಂ ಎಸ್ ಕೆ ಅವರು ಈ ಕಾರ್ಯ ನಿಭಾಯಿಸುವಂತೆ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಸಭೆಯನ್ನು ಮುಂದೂಡಿ ಆದೇಶವನ್ನು ಹೊರಡಿಸಲಾಗಿತ್ತು. 
ಮೊದಲು ಟೀಮ್ ಇಂಡಿಯಾದ ಆಯ್ಕೆ ನಡೆಯುವಾಗ ಬಿಸಿಸಿಐ ಕಾರ್ಯದರ್ಶಿಗಳು ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗವಹಿಸುವುದು ವಾಡಿಕೆ ಆಗಿತ್ತು. ಬಿಸಿಸಿಐ ಆಡಳಿತದಲ್ಲಿ ಬದಲಾವಣೆ ತರಲಾಗಿದ್ದು, ಮ್ಯಾನೇಜ್ಮೆಂಟ್ ಹಾಗೂ ಆಡಳಿತವನ್ನು ಬೇರ್ಪಡಿಸಲು ಮುಂದಾಗಿದೆ. 
ಬಿಸಿಸಿಐ ನೂತನ ಸಂವಿಧಾನದ ಬಳಿಕವೂ ಕಾರ್ಯದರ್ಶಿಗಳು ಆಯ್ಕೆ ಸಮಿತಿಯ ಸಭೆ ನಡೆಸಿಕೊಂಡು ಬರುತ್ತಿದ್ದರು. ಅಲ್ಲದೆ ಆಟಗಾರರ ಬದಲಾವಣೆ ಹಾಗೂ ಸೇರ್ಪಡೆ ಕಾರ್ಯದರ್ಶಿ ಅವರಿಗೆ ಇ-ಮೇಲ್ ಮಾಡಬೇಕಿತ್ತು. ಇನ್ನು  ಅನುಮತಿ ಕೋರುವ ಅವಶ್ಯಕತೆ ಇಲ್ಲ ಎಂದು ಸಿಒಎ ತಿಳಿಸಿತ್ತು.
SCROLL FOR NEXT