ನವದೆಹಲಿ: ವಿಶ್ವಕಪ್ ಮುಕ್ತಾಯಜದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಸಜ್ಜಾಗಿದೆಯಾದರೂ, ಪ್ರವಾಸಕ್ಕಾಗಿ ಇಂದು ನಡೆಯ ಬೇಕಿದ್ದ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಇಂದು ಮುಂಬೈನಲ್ಲಿ ನಡೆಯಬೇಕಿದ್ದ ಬಿಸಿಸಿಐ ಆಯ್ಕೆ ಸಮಿತಿ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಇಂದು ಮುಂಬೈನಲ್ಲಿ ಯಾವುದೇ ರೀತಿಯ ಸಭೆ ನಡೆಯುವುದಿಲ್ಲ. ಮುಂದಿನ ಆಯ್ಕೆ ಸಮಿತಿ ಸಭೆ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯದ ಕುರಿತಂತೆ ಹಾಲಿ ವಿಂಡೀಸ್ ಪ್ರವಾಸ ಪ್ರಾಮುಖ್ಯತೆ ಪಡೆದಿದ್ದು, ವಿಂಡೀಸ್ ಪ್ರವಾಸಕ್ಕಾಗಿ ಧೋನಿ ಅವರನ್ನು ಆಯ್ಕೆ ಮಾಡಬೇಕೇ.. ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇದೆ. ಅಂತೆಯೇ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಸರಣಿಗೆ ತಂಡವನ್ನು ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ತಂಡದಲ್ಲಿ ಕಿರಿಯ ಆಟಗಾರರಿಗೆ ಮಣೆಹಾಕುವ ಅನಿವಾರ್ಯತೆ ಕೂಡ ಇದೆ. ಇದೇ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಉಪನಾಯಕ ರೋಹಿತ್ ಶರ್ಮಾ ತಂಡದ ಮುಂದಾಳತ್ವ ವಹಿಸಿದ್ದಾರೆ.