ಲಾಹೋರ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಹೈವೋಲ್ಟೇಜ್ ಕದನವೆಂದೇ ಹೇಳಲಾಗುತ್ತಿರುವ ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಗೆ ಕೆಲ ಟಿಪ್ಸ್ ನೀಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿದ ಮಾಜಿ ಕ್ರಿಕೆಟಿಗರೂ ಕೂಡ ಆಗಿರುವ ಪ್ರಧಾನಿ ಇಮ್ರಾನ್ ಖಾನ್, 'ನಾನು ಕ್ರಿಕೆಟ್ ವೃತ್ತಿ ಆರಂಭಿಸಿದಾಗ ಶೇ. 70 ಪ್ರತಿಭೆ ಮತ್ತು ಶೇ. 30 ಸಂಕಲ್ಪದಿಂದ ಗೆಲುವು ಸಾಧಿಸಬಹುದು ಎಂದು ಅಂದುಕೊಂಡಿದ್ದೆ. ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗ ಇದು 50-50 ಎಂಬುದು ಗೊತ್ತಾಯಿತು. ಇದೀಗ ನಾನು ನನ್ನ ಗೆಳೆಯ ಸುನಿಲ್ ಗವಾಸ್ಕರ್ ಹೇಳಿದಂತೆ ಗೆಲುವು ಸಾಧಿಸಲು ಶೇ.60 ಮಾನಸಿಕ ಧೈರ್ಯ ಮತ್ತು ಶೇ. 40 ಪ್ರತಿಭೆ ಬೇಕು ಎಂಬ ಮಾತನ್ನು ನಾನು ಒಪ್ಪುತ್ತೇನೆ. ಇವತ್ತು ಮನಸ್ಸಿನ ಸಂಕಲ್ಪದ ಪಾತ್ರ ಶೇ. 60ಕ್ಕಿಂತ ಹೆಚ್ಚು ಇರಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಇವತ್ತು ಎರಡೂ ತಂಡಗಳು ಮಾನಸಿಕ ಒತ್ತಡದಲ್ಲಿದ್ದು, ಅವರ ಮನಸ್ಸಿನ ಸಂಕಲ್ಪಕ್ಕೆ ಅನುಸಾರವಾಗಿ ಇವತ್ತಿನ ಪಂದ್ಯದ ಫಲಿತಾಂಶವಿರುತ್ತದೆ. ಸರ್ಫರಾಜ್ ನಂತಹ ಧೈರ್ಯಶಾಲಿ ನಾಯಕ ನಮ್ಮ ತಂಡಕ್ಕಿರುವುದರಿಂದ, ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈ ಹೊತ್ತಲ್ಲಿ ಮನಸ್ಸು ಹೆಚ್ಚಿನ ಪ್ರಭುತ್ವ ಸಾಧಿಸುವುದರಿಂದ ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಸೋಲಿನ ಭೀತಿ ನಕಾರಾತ್ಮಕ, ರಕ್ಷಣಾತ್ಮಕ ಕಾರ್ಯತಂತ್ರ ಮತ್ತು ಗಂಭೀರ ತಪ್ಪುಗಳಾಗುವಂತೆ ಮಾಡುತ್ತದೆ. ಹಾಗಾಗಿ ಸರ್ಫರಾಜ್ ಮತ್ತು ಪಾಕಿಸ್ತಾನ ತಂಡಕ್ಕೆ ನನ್ನ ಸಲಹೆ ಈ ರೀತಿ ಇದೆ.
ಗೆಲ್ಲಲ್ಲೇಬೇಕು ಎಂಬ ಕಾರ್ಯತಂತ್ರ ರೂಪಿಸುವಾಗ ಸರ್ಫರಾಜ್ ನುರಿತ ದಾಂಡಿಗ ಮತ್ತು ಬೌಲರ್ ಗಳನ್ನು ಆಯ್ಕೆ ಮಾಡಬೇಕು. ಒತ್ತಡವು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪಿಚ್ ಒದ್ದೆಯಾಗಿರದಿದ್ದರೆ ಸರ್ಫರಾಜ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಬೇಕು. ಭಾರತ ನೆಚ್ಚಿನ ತಂಡ ಆಗಿದ್ದರೂ ಸೋಲುವ ಭೀತಿಯಿಂದ ದೂರವಿರಿ. ನಿಮ್ಮಿಂದಾಗುವ ರೀತಿಯಲ್ಲಿ ಕೊನೆಯ ಬಾಲ್ ತನಕ ಹೋರಾಡಿ. ಕ್ರೀಡಾಸ್ಫೂರ್ತಿಯಿಂದಲೇ ನಾವು ಏನೇ ಫಲಿತಾಂಶ ಬಂದರೂ ಸ್ವೀಕರಿಸುತ್ತೇವೆ. ದೇಶದ ಪ್ರಾರ್ಥನೆ ನಿಮ್ಮೊಂದಿಗಿದೆ, ಒಳ್ಳೆಯದಾಗಲಿ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇನ್ನು 2017ರ ಚಾಂಪಿಯನ್ಶಿಪ್ ಟ್ರೋಫಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋತಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ತಯಾರಿ ನಡೆಸಿದೆ. ಹವಾಮಾನ ಇಲಾಖೆ ಹೇಳುವ ಪ್ರಕಾರ ಮ್ಯಾಂಚೆಸ್ಟರ್ನಲ್ಲಿ ಈಗ ಮೋಡ ಕವಿದ ವಾತಾವರಣ ಇದೆ. ಮಧ್ಯಾಹ್ನದ ವೇಳೆಗೆ ಚಿಕ್ಕದಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯುವ ದಿನ ಹವಾಮಾನ ತೀರಾ ಹದಗೆಟ್ಟಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಇಂದಿನ ಪರಿಸ್ಥಿತಿ ಉತ್ತಮವಾಗಿದೆ ಎಂಬುದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos