ನವದೆಹಲಿ: 2019ರ ಏಕದಿನ ವಿಶ್ವಕಪ್ ವರೆಗೂ ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಾಲಿ ಕೋಚ್ ರವಿಶಾಸ್ತ್ರಿ ಅವರ ಗುತ್ತಿಗೆ ಇರಲಿದ್ದು ಆ ಬಳಿಕ ಗುತ್ತಿಗೆ ವಿಸ್ತರಣೆ ಷರತ್ತು ಇಲ್ಲ ಎಂದ ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆ ಅವಧಿ ಮುಕ್ತಾಯದ ಬಳಿಕ ಮತ್ತೆ ಕೋಚ್ ಆಗಿ ಮುಂದುವರೆಯ ಬೇಕಿದ್ದರೆ ರವಿಶಾಸ್ತ್ರಿ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ ಹಳೆಯ ಒಪ್ಪಂದದಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಕೋಚ್ ನೇಮಕ ಪ್ರಕ್ರಿಯೆಯನ್ನು ಬಿಸಿಸಿಐ ಹೊಸದಾಗಿ ನಡೆಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ಶಾಸ್ತ್ರಿ ಹಾಗೂ ತಂಡದ ಇನ್ನಿತರ ಕೋಚ್ ಗಳ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದೆ. ಬಿಸಿಸಿಐ ಕೋಚ್ ಹುದ್ದೆಗೆ ಹೊಸದಾಗಿ ಜಾಹೀರಾತು ನೀಡಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಸಂದರ್ಶನ ನಡೆಸಬೇಕಿದೆ. ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಕೋಚ್ ನೇಮಕ ನಡೆಯಲಿದೆ ಎನ್ನಲಾಗಿದೆ.