ಜೈಪುರ: ಕ್ರಿಕೆಟ್ ನಲ್ಲಿ 'ಮಾಂಕಡ್' ಸಹಜ ಪ್ರಕ್ರಿಯೆಯಾಗಿದ್ದು, ಇಲ್ಲಿ ಕ್ರೀಡಾಸ್ಫೂರ್ತಿಯ ಪ್ರಶ್ನೆ ಎಲ್ಲಿಂದ ಬರುತ್ತದೋ ತಿಳಿಯುತ್ತಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಹೇಳಿದ್ದಾರೆ.
ನಿನ್ನೆ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ವೇಳೆ ಆರ್ ಅಶ್ವಿನ್ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಜಾಸ್ ಬಟ್ಲರ್ ರನ್ನು ಬೌಲಿಂಗ್ ಮಾಡುವ ಮುನ್ನವೇ ರನೌಟ್ ಮಾಡಿದ್ದರು. ಬ್ಯಾಟ್ಸಮನ್ ಗೆ ಯಾವುದೇ ರೀತಿಯ ಎಚ್ಚರಿಕೆ ನೀಡದೇ ಔಟ್ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ದಿಗ್ಗಜರು ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದು, ಇಡೀ ಕ್ರಿಕೆಟ್ ವಲಯ ಇದೀಗ ಅಶ್ವಿನ್ ರ ನಡೆಯನ್ನು ಪ್ರಶ್ನೆ ಮಾಡುತ್ತಿದೆ.
ಈ ನಡುವೆ ಭುಗಿಲೆದ್ದಿರುವ ವಿವಾದ ಸಂಬಂಧ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನ್, ಕ್ರಿಕೆಟ್ ನಲ್ಲಿ ಇದು ಸಹಜ. ಈ ಹಿಂದೆ ಕೂಡ ಸಾಕಷ್ಟು ಬಾರಿ ಇಂತಹ ಪ್ರಕರಣಗಳು ನಡೆದಿವೆ. ಕ್ರಿಕೆಟ್ ನಿಯಮಗಳ ಅನುಸಾರವೇ ಜಾಸ್ ಬಟ್ಲರ್ ರನ್ನು ಔಟ್ ಮಾಡಲಾಗಿದೆ. ಇಲ್ಲಿ ಕ್ರೀಡಾಸ್ಪೂರ್ತಿಯ ಪ್ರಶ್ನೆ ಎಲ್ಲಿಂದ ಉದ್ಭವಾಗುತ್ತದೆಯೋ ತಿಳಿಯುತ್ತಿಲ್ಲ. ಐಸಿಸಿಯ ರೂಲ್ ಬುಕ್ ನಲ್ಲಿ 41.16 ಅಡಿಯಲ್ಲಿ ಬೌಲರ್ ಚೆಂಡನ್ನು ಎಸೆಯುವ ಮುನ್ನವೇ ಬ್ಯಾಟ್ಸಮನ್ ಕ್ರೀಸ್ ಬಿಟ್ಟಿದ್ದರೆ, ಆಗ ಆತನನ್ನು ರನೌಟ್ ಮಾಡಬಹುದು. ಒಂದು ವೇಳೆ ನಾನು ಮಾಡಿದ್ದು ತಪ್ಪು ಎಂದಾದರೆ ನಾವು ಮೊದಲು ನಿಯಮವನ್ನು ಬದಲಿಸಬೇಕಾಗುತ್ತದೆ ಎಂದು ಅಶ್ವಿನ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ನಾನು ಅರ್ಧ ಕ್ರೀಸ್ ನಲ್ಲಿ ಬೌಲಿಂಗ್ ಗೆ ಮುಂದಾಗುತ್ತಿದ್ದಂತೆಯೇ ಜಾಸ್ ಬಟ್ಲರ್ ಕ್ರೀಸ್ ತೊರೆದಿದ್ದರು. ಇಂತಹ ಸಂದರ್ಭದಲ್ಲಿ ನನಗೆ ತೋಚಿದ್ದನ್ನು ನಾನು ಮಾಡಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ. ಅಂತೆಯೇ ತಂಡದ ಗೆಲುವಿನಲ್ಲಿ ಬೌಲರ್ ಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿರುವ ಅಶ್ವಿನ್, ಮೊದಲ 6 ಓವರ್ ಗಳ ಬಳಿಕ ಪಿಚ್ ನಿಧಾನಗತಿಯಲ್ಲಿ ಸಾಗುತ್ತದೆ ಎಂದು ತಿಳಿದಿತ್ತು. ನಮ್ಮ ಗೆಲುವಿನ ಶ್ರೇಯ ಬೌಲರ್ ಗಳಿಗೆ ಧಕ್ಕಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos