ಕ್ರಿಕೆಟ್

ವಿಶ್ವಕಪ್ ಮಹಾಸಮರ: ಟೀಂ ಇಂಡಿಯಾದಲ್ಲಿ ರಿಷಬ್ ಪಂತ್‌ ಇರಬೇಕಿತ್ತು: ಅಜರುದ್ದೀನ್‌

Vishwanath S
ನವದೆಹಲಿ: ವಿಶ್ವಕಪ್ ಮಹಾಸಮರಕ್ಕಾಗಿ ಟೀಂ ಇಂಡಿಯಾ ತಂಡ ಅದಾಗಲೇ ಇಂಗ್ಲೆಂಡ್ ನಲ್ಲಿ ಸಮರಭ್ಯಾಸದಲ್ಲಿ ತೊಡಗಿದ್ದರೆ ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರರು ಯುವ ಕ್ರಿಕೆಟಿಗ ರಿಷಬ್ ಪಂತ್ ಜಪ ಮಾಡುತ್ತಿದ್ದಾರೆ.
ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಮೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ 15 ಆಟಗಾರರ ಭಾರತ ತಂಡದಲ್ಲಿ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇರಬೇಕಿತ್ತು ಎಂದು ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಮಾಧ್ಯವೊಂದರ ಸಂದರ್ಶನದಲ್ಲಿ ಮಾತನಾಡಿದ ಅಜರುದ್ದೀನ್, '2019ರ ಭಾರತ ವಿಶ್ವಕಪ್ ತಂಡ ನಿಜಕ್ಕೂ ಅದ್ಭುತವಾಗಿದ್ದು, ಸಮತೋಲನವಾಗಿದೆ. ಆದರೆ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ತಂಡ ಮಿಸ್ ಮಾಡಿಕೊಂಡಿದೆ ಎನ್ನುವುದು ನನ್ನನಿಸಿಕೆ' ಎಂದರು.
ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅಜರ್, ಒಂದೇ ತಂಡವನ್ನು ಆರಿಸುವ ಬದಲು ಭಾರತ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ತಂಡಗಳನ್ನು ಹೆಸರಿಸಿದರು. ಈ ತಂಡಗಳು ಬಲಿಷ್ಠವಾಗಿವೆ. ನಾಲ್ಕೂ ತಂಡಗಳಿಗೂ ಟ್ರೋಫಿ ಗೆಲ್ಲುವ ಅವಕಾಶವಿದೆ' ಎಂದು ಅಭಿಪ್ರಾಯಪಟ್ಟರು.
ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಜಯಿಸಲಿದೆ ಎಂಬ ಪ್ರಶ್ನೆಗೆ, ಭಾರತ ತಂಡ ಗೆಲ್ಲಲಿದೆ ಎಂದು ಅಝರ್ ಪ್ರತಿಕ್ರಿಯಿಸಿದ್ದಾರೆ. ಮೇ 30 ರಂದು ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ.
SCROLL FOR NEXT