ಬೆಂಗಳೂರು: ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬೇಡದ ಡಿಆರ್ಎಸ್ ತೆಗೆದುಕೊಂಡು ಕೈ ಸುಟ್ಟಿಕೊಂಡಿದ್ದಾರೆ. ಈ ನಿರ್ಣಯದಿಂದ ಮತ್ತೊಂದು ಸುವರ್ಣವಕಾಶವನ್ನು ಕಳೆದುಕೊಂಡು ಕೊನೆಗೆ ಪಂದ್ಯವನ್ನೇ ಸೋಲುವಂತಾಯಿತು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್ ಗಳಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ದೀಪಕ್ ಚಹಾರ್ ಮಾತು ಕೇಳಿ ಕೊಹ್ಲಿ ಮಾಡಿದ ಆ ಒಂದು ಎಡವಟ್ಟು ಕೊನೆಗೆ ಪಂದ್ಯ ಕೈಚೆಲ್ಲುವಂತಾಯಿತು.
ದೀಪಕ್ ಚಹಾರ್ ಎಸೆತ ಹೆಂಡ್ರಿಕ್ ಪ್ಯಾಡ್ ಗೆ ಬಿದ್ದಿದ್ದು ಈ ವೇಳೆ ಚಹಾರ್ ಅಪೀಲ್ ಮಾಡಿದ್ದು ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ಚಹಾರ್ ಬಿಡದೆ ಇದು ಖಂಡಿತವಾಗಿಯೂ ಔಟ್ ಇದೆ ಎಂದು ಕೊಹ್ಲಿಯ ಮನವೊಲಿಸಿದರು. ಇನ್ನು ಅರ್ಧ ಮನಸ್ಸಿನಲ್ಲೇ ಕೊಹ್ಲಿ ಡಿಆರ್ಎಸ್ ಗೆ ಮನವಿ ಮಾಡಿದರು.
ದೃಶ್ಯಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್ ಇದು ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ಅಂಪೈರ್ ಮುಖ ಮುಚ್ಚಿಕೊಂಡಿದರು. ಇದಾದ ನಂತರದ ಓವರ್ ನಲ್ಲೇ ವಾಷಿಂಗ್ಟನ್ ಸುಂದರ್ ಕ್ವಿಂಟನ್ ಡಿ ಕಾಕ್ ರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಮೊದಲೇ ಡಿಆರ್ಎಸ್ ತೆಗೆದುಕೊಂಡಿದ್ದರಿಂದ ಅವಕಾಶ ಕಳೆದುಕೊಂಡಿದ್ದರು. ನಂತರ ರಿಪ್ಲೇಲ್ ನೋಡಿದಾಗ ಎಲ್ಬಿಡಬ್ಲ್ಯೂ ಆಗಿತ್ತು.