ಕ್ರಿಕೆಟ್

ಐಪಿಎಲ್‌ಗೆ ಅಲ್ಲ ವಿಶ್ವಕಪ್‌ಗೆ ಹೆಚ್ಚು ಆದ್ಯತೆ ಸಿಗಲಿ: ಅಲನ್ ಬಾರ್ಡರ್

Srinivasamurthy VN

ಮೆಲ್ಬೋರ್ನ್‌: ಐಪಿಎಲ್ ಗಿಂತ ವಿಶ್ವಕಪ್ ಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಅಲನ್ ಬಾರ್ಡರ್ ಹೇಳಿದ್ದಾರೆ.

ಮಾರಕ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬಾರದಿರುವುದರಿಂದ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿ ನಡೆಯುವುದು ಅನುಮಾನವಾಗಿದ್ದು, ಹಾಗೇನಾದರೂ ಆದಲ್ಲಿ, ಭಾರತದಲ್ಲಿ ಐಪಿಎಲ್‌ ನಡೆಸಲು ಸಾಧ್ಯವಾಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಲನ್ ಬಾರ್ಡರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ಲೀಗ್‌ವೊಂದಕ್ಕೆ ವಿಶ್ವಕಪ್‌ಗಿಂತ ಹೆಚ್ಚು ಆದ್ಯತೆ ಸಿಗಬಾರದು. ಈ ವಿಚಾರದಲ್ಲಿ ನನಗೆ ಸಂತೋಷವಿಲ್ಲ. ವಿಶ್ವಮಟ್ಟದ ಟೂರ್ನಿಯು ಸ್ಥಳೀಯ ಟೂರ್ನಿಗಿಂತ ಹೆಚ್ಚಿನ ಆದ್ಯತೆ ಗಳಿಸಬೇಕು. ಒಂದು ವೇಳೆ ಟಿ20 ವಿಶ್ವಕಪ್‌ ಸಾಧ್ಯವಾಗದಿದ್ದರೆ, ಐಪಿಎಲ್‌ ನಡೆಯಬಹುದು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ಎಬಿಸಿ ರೆಡಿಯೊ ಕಾರ್ಯಕ್ರಮಕ್ಕೆ ಈ ಬಗ್ಗೆ ಮಾತನಾಡಿರುವ ಅಲನ್ ಬಾರ್ಡರ್, ಈ ರೀತಿಯ (ವಿಶ್ವಕಪ್‌ ಬದಲು ಐಪಿಎಲ್‌ ನಡೆಸುವ) ನಿರ್ಧಾರವನ್ನು ನಾನು ಪ್ರಶ್ನಿಸುತ್ತೇನೆ. ಇದು ಕೇವಲ ಹಣ ದೋಚುವಿಕೆ. ಅಲ್ಲವೇ?. ಖಂಡಿತವಾಗಿಯೂ ವಿಶ್ವಕಪ್‌ಗೆ ಆದ್ಯತೆ ನೀಡಬೇಕು. ವಿಶ್ವಕಪ್‌ ಮುಂದೂಡಿ ಐಪಿಎಲ್‌ಗೆ ಅವಕಾಶ ನೀಡಿರುವುದು, ಕ್ರೀಡಾ ಜಗತ್ತಿನ ಕೆಟ್ಟ ನಡವಳಿಕೆಯಾಗುತ್ತದೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ, ಶ್ರೀಮಂತ ಕ್ರಿಕೆಟ್‌ ಲೀಗ್‌ ಆಯೋಜನೆಗೆ ಪ್ರತಿಭಟನೆಯಾಗಿ ಯಾವುದೇ ದೇಶಗಳು ಮತ್ತು ಮಂಡಳಿಗಳು ತಮ್ಮ ಆಟಗಾರರನ್ನು  ಕಳುಹಿಸಬಾರದು. ಆದರೆ, ವಿಶ್ವ ಕ್ರಿಕೆಟ್‌ ಈ ರೀತಿ ಆಗಲು ಅವಕಾಶ ನೀಡುತ್ತದೆ ಎಂದು ಅಂದುಕೊಂಡಿಲ್ಲ. ಭಾರತ ಅಂತರರಾಷ್ಟ್ರೀಯ ಕ್ರಿಕೆಟ್‌ ಅನ್ನು ಮೀರಿ ಸಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗೇನಾದರು ಆದರೆ, ಅದು ತಪ್ಪು ಹಾದಿಯಲ್ಲಿ ಸಾಗಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್ ನಿಂದಾಗಿ ಕ್ರೀಡಾ ಜಗತ್ತಿನ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್‌ ಅನ್ನು ಈಗಾಗಲೇ ಮುಂದೂಡಲಾಗಿದೆ. ಹೀಗಿದ್ದರೂ ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ಚರ್ಚೆ ಮುಂದುವರೆದಿದೆ. ಅಕ್ಟೋಬರ್‌ 18ರಿಂದ ನವೆಂಬರ್‌ 15ರ ವರೆಗೆ ಟಿ20 ವಿಶ್ವಕಪ್‌ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್‌ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

SCROLL FOR NEXT