ಕ್ರಿಕೆಟ್

ಜುಲೈಯಲ್ಲಿ ಶ್ರೀಲಂಕಾ ಸರಣಿ ಪ್ರವಾಸ: ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್!

Sumana Upadhyaya

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಜುಲೈಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಆಡಲಿರುವ ಏಕದಿನ  ಹಾಗೂ ಟಿ20 ಸರಣಿ ಪಂದ್ಯಗಳ ಕೋಚ್ ಆಗಿ ನೇಮಕವಾಗಿದ್ದಾರೆ. 

2014ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಸಲಹೆಗಾರನಾಗಿ ಕೆಲಸ ಮಾಡಿದ್ದರು.ಈ ಮಾಹಿತಿಯನ್ನು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿರುವ ಬಿಸಿಸಿಐ ಅಧಿಕಾರಿ, ಈ ಸಮಯದಲ್ಲಿ ಕೋಚ್ ರವಿ ಶಾಸ್ತ್ರಿ, ಭರತ್ ಅರುಣ್ ಮತ್ತು ವಿಕ್ರಮ್ ರಾಥೋರ್ ಅವರು ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ರಾಹುಲ್ ದ್ರಾವಿಡ್ ಅವರನ್ನು ನಿಯೋಜಿಸಲಾಗುತ್ತಿದೆ ಎಂದರು.

ಭಾರತ ತಂಡದ ಕೋಚಿಂಗ್ ಸಿಬ್ಬಂದಿ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡಿನಲ್ಲಿರುತ್ತಾರೆ, ಹೀಗಾಗಿ ರಾಹುಲ್ ದ್ರಾವಿಡ್ ಅವರನ್ನು ನಿಯೋಜಿಸಲಾಗುತ್ತಿದೆ. ಅವರು ಈಗಾಗಲೇ ಭಾರತದ ಯುವ ತಂಡಕ್ಕೆ ತರಬೇತಿ ನೀಡಿ ತಂಡದ ಆಟಗಾರರೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಆಟಗಾರರು ಸಹ ರಾಹುಲ್ ದ್ರಾವಿಡ್ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರು 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅಂಡರ್-19 ಭಾರತ ಕ್ರಿಕೆಟ್ ತಂಡದೊಂದಿಗೆ ಕೆಲಸ ಮಾಡಿದ್ದರು. ಜೊತೆಗೆ ಭಾರತದ ಎ ಕ್ರಿಕೆಟ್ ತಂಡದ ಜೊತೆ ಕೂಡ ಕೆಲಸ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಲಿಷ್ಠ ಭಾರತದ ತಂಡ ಕಟ್ಟುವಲ್ಲಿ ಅವರು ಸಹಾಯ ಮಾಡಿದ್ದಾರೆ. 2015ರಲ್ಲಿ ಅಂಡರ್-19 ತಂಡದ ನೇತೃತ್ವವನ್ನು ವಹಿಸಿದ್ದರು.

ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಈ ತಿಂಗಳಾಂತ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದ್ದು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡುವ ಮುನ್ನ ಆಟಗಾರರು ಶ್ರೀಲಂಕಾದಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ. ಮೂರು ಏಕದಿನ ಪಂದ್ಯಗಳು ಜುಲೈ 13, 16 ಮತ್ತು 19 ರಂದು ಹಾಗೂ ಟಿ20 ಜುಲೈ 22 ರಿಂದ 27ರವರೆಗೆ ನಡೆಯುವ ಸಾಧ್ಯತೆಯಿದೆ.

ಈ ಸಮಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಇಂಗ್ಲೆಂಡ್ ವಿರುದ್ಧ ಆಗಸ್ಟ್ 4 ರಂದು ಆರಂಭವಾಗುವ 5 ಟೆಸ್ಟ್ ಸರಣಿಗಳನ್ನು ಆಡಲು ತಯಾರು ನಡೆಸುತ್ತಿರುತ್ತದೆ. ಅದಕ್ಕೂ ಮುನ್ನ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚ್ಯಾಂಪಿಯನ್ ಷಿಪ್ ಗೆ ಸೌತಂಪ್ಟನ್ ನಲ್ಲಿ ಜೂನ್ 18 ರಿಂದ 22ರವರೆಗೆ ಆಡಲಿದೆ.

SCROLL FOR NEXT