ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ವ್ಯಾಪಕ ಟೀಕೆಗೆ ಗುರಿಯಾಗಿರುವ ಭಾರತ ತಂಡದ ಮಹಮದ್ ಶಮಿಗೆ ಬಿಸಿಸಿಐ ಬೆಂಬಲ ವ್ಯಕ್ತಪಡಿಸಿದ್ದು, 'ನೀವು ದೇಶದ ಹೆಮ್ಮೆ' ಎಂದು ಹೇಳಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಶಮಿ ಹೆಚ್ಚು ರನ್ ನೀಡಿದ್ದರು. ಇದು ಪಾಕಿಸ್ತಾನಕ್ಕೆ ಜಯ ಸುಲಭವಾಗುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಶಮಿಯನ್ನು ಗುರಿಯಾಗಿಸಿಕೊಂಡು ಧರ್ಮ ನಿಂದನೆ ಮಾಡಲಾಗುತ್ತಿತ್ತು. ಅಲ್ಲದೆ ದೇಶ ಬಿಡುವಂತೆ ಕೆಲ ಕಿಡಿಕೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಶಮಿಗೆ ಭಾರತದ ಹಿರಿಯ ಕ್ರಿಕೆಟಿಗರು ಬೆಂಬಲ ನೀಡಿ ಆತ್ಮ ಸ್ಥೈರ್ಯ ತುಂಬಿದ್ದರು.
ಇದೀಗ ಬಿಸಿಸಿಐ ಕೂಡ ಶಮಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದು, ನೀವು ದೇಶಕ್ಕೆ ಹೆಮ್ಮೆ..ತಂಡದಲ್ಲಿ ಪ್ರಬಲ ಇನ್ನೂ ಮೇಲಕ್ಕೆ ಏರಿ ಮುಂದಕ್ಕೆ ಸಾಗಿ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದೆ. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದೆ.