ಕ್ರಿಕೆಟ್

ರೋಹಿತ್ ಶರ್ಮಾ 50* ವ್ಯರ್ಥ; 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರೋಚಿತ ಸೋಲು; ಸರಣಿ ಬಾಂಗ್ಲಾ ಕೈವಶ!

Vishwanath S

ಮೀರ್‌ಪುರ್‌: ಅತಿಥೇಯ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ ಸ್ಫೋಟಕ ಅರ್ಧ ಶತಕ ಸಿಡಿಸಿದರೂ ತಂಡ 6 ರನ್ ಗಳಿಂದ ಸೋಲು ಅನುಭವಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿತ್ತು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ ಅಜೇಯ ಶತಕ ತಂಡ ಸ್ಪರ್ಧಾತ್ಮಕ ರನ್ ಕಲೆ ಹಾಕಲು ಸಾಧ್ಯವಾಯಿತು. ಇನ್ನು ಬಾಂಗ್ಲಾ ನೀಡಿದ 272 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೊನೆಯವರೆಗೂ ಗೆಲುವಿಗಾಗಿ ಯತ್ನಿಸಿ ಸೋಲು ಕಂಡಿದೆ. 

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 5 ರನ್ ಗಳಿಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಶಿಖರ್ ಧವನ್ ಸಹ 8 ರನ್ ಗಳಿಸಿದ್ದಾಗ ಮೆಹದಿ ಹಸನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಶ್ರೇಯಸ್ ಅಯ್ಯರ್ ತಾಳ್ಮೆಯ ಆಟವಾಡಿ 82 ರನ್ ಪೇರಿಸಿದ್ದರು. ಆದರೆ ಈ ವೇಳೆ ಅಯ್ಯರ್ ನಾಗಾಲೋಟಕ್ಕೆ ಮೆಹಿದಿ ಹಸನ್ ಬ್ರೇಕ್ ಹಾಗಿದರು. ನಂತರ ಬಂದ ವಾಷಿಂಗ್ಟನ್ ಸುಂದರ್ 11 ರನ್ ಗೆ ಔಟಾದರು. 

ನಂತರ ಅಕ್ಷರ್ ಪಟೇಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ 56 ರನ್ ಪೇರಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ ಅಕ್ಷರ್ ಔಟ್ ಆದ ಬಳಿಕ ಬಂದ ಶಾರ್ದೂಲ್ ಠಾಕೂರ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು 7 ರನ್ ಹಾಗೂ ದೀಪಕ್ ಚಹಾರ್ 11 ರನ್ ಬಾರಿಸಿ ಔಟಾದರು. ಇದು ಚೆಂಡು ಮತ್ತು ರನ್ ಗಳ ಅಂತರವನ್ನು ಹೆಚ್ಚಿಸಿತ್ತು. 

ಇನ್ನು ಆಟದ ವೇಳೆ ಗಾಯಗೊಂಡು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರೋಹಿತ್ ಶರ್ಮಾ 5 ಸಿಕ್ಸರ್ ಮತ್ತು 3 ಬೌಂಡರಿ ಒಳಗೊಂಡಂತೆ 28 ಎಸೆತಗಳಲ್ಲಿ 51 ರನ್ ಪೇರಿಸಿ ಗೆಲುವಿನ ಭರವಸೆ ಮೂಡಿಸಿದರು. ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 6 ಎಸೆತಗಳಲ್ಲಿ 20 ರನ್ ಬೇಕಿತ್ತು. ಈ ವೇಳೆ ಎರಡು ಮತ್ತು ಮೂರನೇ ಎಸೆತದಲ್ಲಿ  ಬೌಂಡರಿ ಹಾಗೂ ಐದನೇ ಎಸೆತದಲ್ಲಿ ಸಿಕ್ಸ್ ಬಾರಿಸಿದರು. ಇದರೊಂದಿಗೆ ಕೊನೆಯ ಎಸೆತದಲ್ಲಿ ತಂಡಕ್ಕೆ 6 ರನ್ ಬೇಕಿತ್ತು. ಇನ್ನೇನು ಕೊನೆಯ ಎಸೆತದಲ್ಲಿ 6 ಬಾರಿಸುವ ಮೂಲಕ ರೋಹಿತ್ ಶರ್ಮಾ ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂದು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಭಾವಿಸಿದ್ದರು. ಆದರೆ ಕೊನೆಯ ಎಸೆತವನ್ನು ಮುಸ್ತಫಿಜುರ್ ರೆಹಮಾನ್ ಯಾರ್ಕರ್ ಹಾಕುವ ಮೂಲಕ ಬಾಂಗ್ಲಾಗೆ ಗೆಲುವು ತಂದುಕೊಟ್ಟರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-0 ಅಂತರದಿಂದ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. 

SCROLL FOR NEXT