ಕ್ರಿಕೆಟ್

ಮದುವೆಗೆ ಸಿದ್ಧವಾಗಿದ್ದ 'ಶತಕ ವೀರ' ರಜತ್ ಪಾಟಿದಾರ್: RCB ಯಿಂದ ಕರೆಬಂದಿದ್ದೆ ತಡ ಐಪಿಎಲ್ ಗೆ ದೌಡು!

Vishwanath S

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಿನ್ನೆ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ರಜತ್ ಪಾಟಿದಾರ್ ಅಜೇಯ 112 ರನ್ ಬಾರಿಸಿದ್ದು ಆರ್ ಸಿಬಿ ತಂಡಕ್ಕೆ ಹೀರೋ ಆಗಿದ್ದರು. ಆದರೆ, ಫೆಬ್ರವರಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಜತ್ ಪಾಟಿದಾರ್ ಮಾರಾಟವಾಗದೆ ಹೋಗಿದ್ದರಿಂದ ಅವರ ಕುಟುಂಬಸ್ಥರು ರಜತ್ ಗೆ ಮದುವೆ ಮಾಡಲು ನಿಶ್ಚಯಿಸಿದ್ದರು.

ಐಪಿಎಲ್ ಸಮಯದಲ್ಲಿ ದೇಶದಲ್ಲಿ ಯಾವುದೇ ದೇಶೀಯ ಕ್ರಿಕೆಟ್ ಗಳು ನಡೆಯುವುದಿಲ್ಲ. ಈ ಸಮಯವನ್ನೇ ಬಳಸಿಕೊಂಡು ಕುಟುಂಬಸ್ಥರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ರಜತ್ ಗಾಗಿ ರತ್ಲಾಮ್‌ನಿಂದ ಹುಡುಗಿಯನ್ನು ನೋಡಿಕೊಂಡು ಬಂದಿದ್ದು, ಮೇ 9ರಂದು ಮದುವೆ ಮಾಡಲು ಯೋಜಿಸಲಾಗಿತ್ತು. ಸರಳವಾಗಿ ಮದುವೆ ಸಮಾರಂಭವನ್ನು ನಡೆಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಇಂದೋರ್‌ನಲ್ಲಿ ಹೋಟೆಲ್ ಅನ್ನು ಸಹ ಬುಕ್ ಮಾಡಿದ್ದೇವು ಎಂದು ರಜತ್ ಅವರ ತಂದೆ ಮನೋಹರ್ ಪಾಟಿದಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.

ರಜತ್ ಐಪಿಎಲ್ ಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿಂದ ಕುಟುಂಬಸ್ಥರು ಇದಕ್ಕೂ ಮೊದಲು ದೀಪಾವಳಿಯ ಆಸುಪಾಸಿನಲ್ಲಿ ಮದುವೆ ಮಾಡಲು ಯೋಜಿಸಿತ್ತು. ಆದರೆ ಮೆಗಾ ಹರಾಜಿನಲ್ಲಿ ರಜತ್ ಆಯ್ಕೆಯಾಗಿರದ ಕಾರಣ ಮೇನಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದರು. ಆದರೆ ಆರ್ ಸಿಬಿಯಿಂದ ತಡವಾಗಿ ಕರೆ ಬಂದಿದ್ದರಿಂದ ಮದುವೆ ಬಿಟ್ಟು ರಜತ್ ಆರ್ ಸಿಬಿ ತಂಡ ಸೇರಿಕೊಂಡಿದ್ದರು. 

ಅದ್ಧೂರಿಯಾಗಿ ಮದುವೆ ಮಾಡುವ ಇಚ್ಛೆ ಇರಲಿಲ್ಲ. ಹೀಗಾಗಿ ನಾವು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿರಲಿಲ್ಲ. ನಾವು ಸೀಮಿತ ಅತಿಥಿಗಳಿಗಾಗಿ ಹೋಟೆಲ್ ಅನ್ನು ಕಾಯ್ದಿರಿಸಿದ್ದೇವು. ಇದೀಗ ಐಪಿಎಲ್ ಮುಗಿದ ನಂತರ ಜುಲೈನಲ್ಲಿ ಸಮಾರಂಭವನ್ನು ನಡೆಸಲು ನಾವು ಯೋಜಿಸಿರುವುದರಿಂದ ಬುಕಿಂಗ್ ಅನ್ನು ಮುಂದೂಡಲಾಗಿದೆ. ಜೂನ್ 6 ರಿಂದ 10 ರವರೆಗೆ ನಡೆಯಲಿರುವ ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ಪಂಜಾಬ್ ವಿರುದ್ಧ ಸೆಣಸಲಿದೆ.

SCROLL FOR NEXT