ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ಗಾಯಾಳುಗಳ ಗಾಯದ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ಆಟಗಾರರು ಕೂಡ ಗಾಯದಿಂದ ಹೊರಗುಳಿದಿದ್ದು, ಅವರ ಬದಲಿಗೆ ಇಬ್ಬರು ಆಟಗಾರರು ತಂಡ ಸೇರ್ಪಡೆಯಾಗಿದ್ದಾರೆ.
ಗಾಯಗೊಂಡಿರುವ ರೀಸ್ ಟಾಪ್ಲಿ ಮತ್ತು ರಜತ್ ಪಾಟಿದಾರ್ ಅವರ ಬದಲಿಗೆ ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಮತ್ತು ಕರ್ನಾಟಕದ ವೈಶಾಕ್ ವಿಜಯ್ ಕುಮಾರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸರಣಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಸಂದರ್ಭ ಟಾಪ್ಲಿ ಗಾಯಗೊಂಡಿದ್ದರು.
ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಪಾಟಿದಾರ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಐಪಿಎಲ್ ಸರಣಿಯಿಂದಲೇ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ಪರ 56 ಟಿ–20, 6 ಟೆಸ್ಟ್ ಮತ್ತು 73 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಪಾರ್ನೆಲ್, ಟಿ–20 ಕ್ರಿಕೆಟ್ನಲ್ಲಿ 59 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ನಲ್ಲಿ 26 ಪಂದ್ಯಗಳನ್ನು ಆಡಿರುವ ಪಾರ್ನೆಲ್ ಅವರಿಗೆ 75 ಲಕ್ಷ ರೂ ಕೊಟ್ಟು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.
ಪಾಟಿದಾರ್ ಬದಲಿಗೆ ಕರ್ನಾಟಕ ವೈಶಾಕ್ ವಿಜಯ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದು, ದೇಶೀಯ ಕ್ರಿಕೆಟ್ನಲ್ಲಿ 14 ಟಿ–20 ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ವೈಶಾಕ್ ಅವರಿಗೆ ಆರ್ಸಿಬಿ 20 ಲಕ್ಷ ರೂ ಕೊಟ್ಟಿದೆ. ಪ್ರಸ್ತುತ ಐಪಿಎಲ್ ಸರಣಿಯಲ್ಲಿ ಆರ್ಸಿಬಿ ಎರಡು ಪಂದ್ಯಗಳನ್ನು ಆಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ತಂಡ, ಕೋಲ್ಕತ್ತ ವಿರುದ್ಧ ಹೀನಾಯ ಸೋಲುಂಡಿದೆ.