ಕ್ರಿಕೆಟ್

ಪಾಕಿಸ್ತಾನ ಕ್ರಿಕೆಟ್ ಈ ಸ್ಥಿತಿಗೆ ಬಿಸಿಸಿಐನ 'ಬಿಜೆಪಿ ಮನಸ್ಥಿತಿ' ಕಾರಣ: ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ

Vishwanath S

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಇದೀಗ ಮತ್ತೊಮ್ಮೆ ರಮೀಜ್ ರಾಜಾ ಭಾರತ ಮತ್ತು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ರಮೀಜ್ ರಾಜಾ ಅವರ ಈ ಹೇಳಿಕೆಗೆ ಇದೀಗ ಪಾಕಿಸ್ತಾನದಲ್ಲಿ ಅಲ್ಲ, ಭಾರತದಲ್ಲಿ ಸಂಚಲನ ಉಂಟಾಗಿದೆ. ಭಾರತವನ್ನು ಗುರಿಯಾಗಿಸಿಕೊಂಡು ರಾಜಾ, ಪಾಕಿಸ್ತಾನವನ್ನು ನಾಶಪಡಿಸುವಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ದೊಡ್ಡ ಕೈವಾಡವಿದೆ ಎಂದು ಹೇಳಿದ್ದಾರೆ. ಬಿಸಿಸಿಐ ಒಳಗೆ ಏನೇ ನಡೆದರೂ ಅದರ ಹಿಂದೆ ಬಿಜೆಪಿಯ ಮನಸ್ಥಿತಿ ಇದೆ ಎಂದು ಅವರು ಹೇಳಿದರು.

ಲಾಹೋರ್ ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ರಾಜಾ ಈ ಹೇಳಿಕೆ ನೀಡಿದ್ದಾರೆ. ದುರದೃಷ್ಟವಶಾತ್ ಭಾರತದಲ್ಲಿ ಏನೇ ಆಗಲಿ, ಅದರ ಹಿಂದೆ ಅಲ್ಲಿನ ಬಿಜೆಪಿಯ ಮನಸ್ಥಿತಿಯೇ ಇದೆ ಎಂದರು. ಇನ್ನು PJL ಆಗಿರಲಿ ಅಥವಾ ಪಾಕಿಸ್ತಾನ್ ಮಹಿಳಾ ಲೀಗ್ ಆಗಿರಲಿ, ನಾವು ನಮ್ಮದೇ ಆದ ಹಣವನ್ನು ಸಂಪಾದಿಸುವ ಸ್ವತ್ತುಗಳನ್ನು ರಚಿಸಬಹುದು. ಅದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹಣವನ್ನು ನೀಡುತ್ತದೆ. ಇದರಿಂದ ನಮ್ಮನ್ನು ICC ನಿಧಿಯಿಂದ ದೂರವಿಡುವಂತೆ ಮಾಡುತ್ತದೆ ಎಂದು ಸಲಹೆ ನೀಡಿದ್ದರು.

ಮಾಜಿ ಪಿಸಿಬಿ ಅಧ್ಯಕ್ಷರು, 'ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಏಕೆಂದರೆ ಹೆಚ್ಚಿನ ಐಸಿಸಿ ಸಂಪನ್ಮೂಲಗಳು ಭಾರತದಿಂದ ಸಿಗುತ್ತದೆ. ಇನ್ನು ಪಾಕಿಸ್ತಾನವನ್ನು ಕಡೆಗಣಿಸುವುದೇ ಭಾರತದ ಮನಸ್ಥಿತಿಯಾಗಿರುವುದರಿಂದ ನಾವು ಇಲ್ಲಿಯೂ ಇಲ್ಲ, ಅಲ್ಲಿಯೂ ಇರುವುದಿಲ್ಲ ಎಂದರು.

ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರ ಈ ಹೇಳಿಕೆಗೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು, ರಮೀಜ್ ರಾಜಾ ಹತಾಶರಾಗಿದ್ದಾರೆ. ಅವರು ಮಾತನಾಡುತ್ತಿರುವುದರಲ್ಲಿ ಯಾವುದೇ ತರ್ಕವಿಲ್ಲ. ಕ್ರಿಕೆಟ್ ಜೊತೆಗೆ ರಾಜಕೀಯ ಬೆರೆಸುವುದು ಸರಿಯಲ್ಲ. ಆದರೆ ಅವರು ಈ ಹಿಂದೆಯೂ ಹಲವು ಬಾರಿ ಇದನ್ನು ಮಾಡಿದ್ದಾರೆ. ಅವರ ಹೇಳಿಕೆಗೆ ನಾವು ಹೆಚ್ಚು ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT