ಕ್ರಿಕೆಟ್

ಭೀಕರ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಪಾರು!

Manjula VN

ಲಖನೌ: ಮೀರತ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಪ್ರವೀಣ್ ಕುಮಾರ್ ಅವರು ಸಾಗುತ್ತಿದ್ದ ಕಾರಿಗೆ ಅತಿವೇಗವಾಗಿ ಬಂದ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಅದೃಷ್ಟವಶಾತ್ ಪ್ರವೀಣ್ ಕುಮಾರ್ ಮತ್ತು ಅವರ ಮಗ ಇಬ್ಬರೂ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ, ಅವರ ಕಾರು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರವೀಣ್ ಕುಮಾರ್ ಅವರು ಮಂಗಳವಾರ ರಾತ್ರಿ ಪಾಂಡವ ನಗರದಿಂದ ಅವರ ಮನೆಗೆ ಮರಳುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಕಮಿಷನರ್ ನಿವಾಸದ ಎದುರು ಅತೀವೇಗವಾಗಿ ಬಂದ ಟ್ರಕ್ ಪ್ರವೀಣ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಗುಂಪು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ಹಿಡಿದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ತಿಳಿಯುತ್ತಿದ್ದಂತೆ ಸಿವಿಲ್ ಲೈನ್ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಪ್ರವೀಣ್ ಕುಮಾರ್, ಪ್ರಸ್ತುತ ಮೀರತ್‌ನ ಮುಲ್ತಾನ್ ನಗರದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ 2008ರಂದು ನಡೆದ CB ಸರಣಿಯಲ್ಲಿ ಭಾರತ ಗೆಲ್ಲುವಲ್ಲಿ ಪ್ರವೀಣ್ ನಿರ್ಣಾಯಕ ಪಾತ್ರವಹಿಸಿದ್ದರು.

ಪ್ರವೀಣ್ ಕುಮಾರ್ ಟೀಂ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್, 68 ಏಕದಿನ ಪಂದ್ಯಗಳಲ್ಲಿ 77 ವಿಕೆಟ್ ಮತ್ತು 10 ಟಿ20 ಪಂದ್ಯಗಳಲ್ಲಿ 8 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ 119 ಪಂದ್ಯಗಳನ್ನಾಡಿರುವ ಪ್ರವೀಣ್ 90 ವಿಕೆಟ್ ಪಡೆದಿದ್ದಾರೆ.

SCROLL FOR NEXT