ನವದೆಹಲಿ: ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ತಂಡವು ಇನ್ನೂ ಮುಂದಿನ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರಶಸ್ತಿಗಾಗಿ ಕಾಯಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.
ಕ್ಲಬ್ ಪ್ರೈರೀ ಫೈರ್ ಪಾಡ್ಕಾಸ್ಟ್ನೊಂದಿಗೆ ಮಾತನಾಡಿದ ಅವರು, ಟೀಂ ಇಂಡಿಯಾದ ಬಹುತೇಕ ಆಟಗಾರರು ಇದೀಗ ಫಾರ್ಮ್ನಲ್ಲಿದ್ದಾರೆ. ಈ ಬಾರಿ ಭಾರತಕ್ಕೆ ಐಸಿಸಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸಲು ಉತ್ತಮ ಅವಕಾಶ ಸಿಕ್ಕಿದೆ ಎಂದು ಹೇಳಿದರು.
"ಈ ದೇಶವು ಹುಚ್ಚಿನಿಂದ ಪ್ರಶಸ್ತಿಗಾಗಿ ಕಾಯುತ್ತಾ ಕುಳಿತಿದೆ. ಭಾರತ ನೆಯ ಬಾರಿಗೆ 12 ವರ್ಷಗಳ ಹಿಂದೆ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಟೀಂ ಇಂಡಿಯಾಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಟೀಂ ಇಂಡಿಯಾ ಸದ್ಯ ಆಡುತ್ತಿರುವ ರೀತಿಯನ್ನು ಗಮನಿಸಿದರೆ, ಇದು ಬಹುಶಃ ಅತ್ಯುತ್ತಮ ಅವಕಾಶವಾಗಿದೆ" ಎಂದು ತಿಳಿಸಿದರು.
'ಅವರು (ಭಾರತ ತಂಡ) ಈ ಬಾರಿ ಪ್ರಶಸ್ತಿ ಪಡೆಯುವಲ್ಲಿ ವಿಫಲರಾದರೆ, ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಮುಂದಿನ ಮೂರು ಆವೃತ್ತಿಗಳಿಗಾಗಿ ಕಾಯಬೇಕಾಗುತ್ತದೆ. ಟೀಂ ಇಂಡಿಯಾದ 7-8 ಆಟಗಾರರು ಸದ್ಯ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ' ಎಂದರು.
'ಸದ್ಯ ಉತ್ತಮವಾಗಿ ಆಡುತ್ತಿರುವ ಭಾರತದ ತಂಡವು, ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಇದು ಕೊನೆಯ ಅವಕಾಶ ಆಗಿರಬಹುದು. ಭಾರತದ ಬೌಲಿಂಗ್ ದಾಳಿಯು ಇಲ್ಲಿಯವರೆಗೆ ಅನೇಕ ದಿಗ್ಗಜ ಬ್ಯಾಟರ್ಗಳನ್ನು ಕೆಡವಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಮಿಂಚುತ್ತಿದ್ದಾರೆ. ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರ ಸ್ಪಿನ್ ಸಂಯೋಜನೆ ಕೂಡ ಮಧ್ಯಮ ಓವರ್ಗಳಲ್ಲಿ ಉತ್ತಮವಾಗಿ ಮೂಡಿಬಂದಿದೆ' ಎಂದು ರವಿಶಾಸ್ತ್ರಿ ಹೇಳಿದರು.
ಸದ್ಯ ಟೀಂ ಇಂಡಿಯಾದ ಆಡುವ 11ರ ಬಳಗದಲ್ಲಿರುವ ಬೌಲರ್ಗಳು ಭಾರತ ಕಂಡ ಅತ್ಯುತ್ತಮ ಬೌಲರ್ಗಳಾಗಿದ್ದಾರೆ. ಇದು ಅಸಾಧಾರಣವಾಗಿದೆ ಮತ್ತು ಇದು ರಾತ್ರೋರಾತ್ರಿ ಸಂಭವಿಸಿಲ್ಲ. ಬದಲಿಗೆ ಸಮಯ ತೆಗೆದುಕೊಂಡಿದೆ. ಎಲ್ಲಾ ಬೌಲರ್ಗಳು ನಾಲ್ಕೈದು ವರ್ಷಗಳಿಂದ ತಂಡಕ್ಕಾಗಿ ಆಡುತ್ತಿದ್ದಾರೆ. ಸಿರಾಜ್ ಮೂರು ವರ್ಷಗಳ ಹಿಂದೆ ತಂಡವನ್ನು ಸೇರಿದರು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
'ಅವರಿಗೆ (ಬೌಲರ್ಗಳಿಗೆ) ಚೆಂಡನ್ನು ಸ್ಥಿರವಾಗಿ ಎಲ್ಲಿ ಎಸೆಯಬೇಕು ಎಂಬುದು ತಿಳಿದಿದೆ. ಸರಿಯಾದ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಶೇ 90 ರಷ್ಟು ಸಮಯ ಅವರು ಸ್ಟಂಪ್ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವೈಟ್-ಬಾಲ್ ಕ್ರಿಕೆಟ್ ಪ್ರಾರಂಭವಾದ 50 ವರ್ಷಗಳಲ್ಲಿ ಇದು ಅತ್ಯುತ್ತಮ ಬಳಿಂಗ್ ದಾಳಿಯಾಗಿದೆ' ಎಂದು ರವಿಶಾಸ್ತ್ರಿ ಹೇಳಿದರು.
ಇದನ್ನೂ ಓದಿ: ICC Cricket World Cup Semi-Final 2023: ಪಾಕಿಸ್ತಾನ ಮನೆಗೆ, ಸೆಮಿಫೈನಲ್ ಪಂದ್ಯಗಳನ್ನು ಪ್ರಕಟಿಸಿದ ಐಸಿಸಿ!
ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಭಾರತ ತಂಡ ನವೆಂಬರ್ 15ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆಯಲ್ಲಿ ಈ ಪಂದ್ಯ ನಡೆಯಲಿದೆ.