ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ನ ಐದನೇ ದಿನದಂದೂ ಭಾರತದ ಸ್ಟಾರ್ ಬ್ಯಾಟರ್ಗಳಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಮತ್ತು ಕೊಹ್ಲಿ ವಿರುದ್ಧ ಇದೀಗ ಇಂಟರ್ನೆಟ್ ಬಳಕೆದಾರರು ಮುಗಿಬಿದ್ದಿದ್ದಾರೆ. ನಿವೃತ್ತಿ ಪಡೆಯಲು ಇದು ಒಳ್ಳೆಯ ಸಮಯ ಎಂದು ಕಾಲೆಳೆದಿದ್ದಾರೆ.
ಅನುಭವಿ ಬ್ಯಾಟ್ಸ್ಮನ್ಗಳು ಇತ್ತೀಚೆಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ 9 ರನ್ಗೆ ಔಟಾದರೆ, ವಿರಾಟ್ 5 ರನ್ಗಳಿಗೆ ಸ್ಲಿಪ್ನಲ್ಲಿ ಕ್ಯಾಚ್ ನೀಡಿದರು. ರೋಹಿತ್ ಅವರನ್ನು ಪ್ಯಾಟ್ ಕಮಿನ್ಸ್ ಅವರು ಗಲ್ಲಿಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಪೆವಿಲಿಯನ್ಗೆ ಕಳುಹಿಸಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಕೊಹ್ಲಿ ವಿಕೆಟ್ ಕೈಚೆಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 340 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಊಟದ ವಿರಾಮದ ಹೊತ್ತಿಗೆ ಮೂರು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು. ಭಾರತದ ಪರ ರೋಹಿತ್ ಶರ್ಮಾ (9), ಕೆಎಲ್ ರಾಹುಲ್ (0) ಮತ್ತು ವಿರಾಟ್ ಕೊಹ್ಲಿ (5) ಔಟಾದರು.
ಬಾಕ್ಸಿಂಗ್ ಡೇ ಟೆಸ್ಟ್ನ ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದ್ದು, ಒಟ್ಟಾರೆ 333 ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಐದನೇ ದಿನ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯಾ, 234 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ (3/70) ಮತ್ತು ರವೀಂದ್ರ ಜಡೇಜಾ (1/33) ಅವರ ನೆರವಿನಿಂದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (5/57) ಐದು ವಿಕೆಟ್ ಕಬಳಿಸುವುದರೊಂದಿಗೆ ತಂಡಕ್ಕೆ ನೆರವಾದರು.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಸರಣಿಯ 4ನೇ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲುಂಟಾಗಿದೆ. ಆಸ್ಟ್ರೇಲಿಯಾ ನೀಡಿದ್ದ ರನ್ ಗುರಿ ಬೆನ್ನಟ್ಟಿದ ಭಾರತ 155 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 184 ರನ್ಗಳ ಸೋಲು ಕಂಡಿದೆ. 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿಯ ಅಂತಿಮ ಪಂದ್ಯ ಜನವರಿ 3ರಂದು ಸಿಡ್ನಿಯಲ್ಲಿ ನಡೆಯಲಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿರುದ್ಧ ಕಿಡಿಕಾರಿರುವ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತರಹೇವಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ರೋಹಿತ್, ರಾಹುಲ್, ವಿರಾಟ್ ಅವರನ್ನು ತಂಡದಿಂದ ಕೈಬಿಡಬೇಕು ಮತ್ತು ತಾವೇ ಆದಷ್ಟು ಬೇಗ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಬೇಕು ಎಂದು ಸಚಿನ್ ಶರ್ಮಾ ಎಂಬುವವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ನಂತರ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ಬಗ್ಗೆ ಯೋಚಿಸಬೇಕು ಮತ್ತು ಅವರು ಈ ಪರಂಪರೆಯನ್ನು ಕೈಬಿಡಬೇಕು ಎಂದು ನವಲ್ದೀಪ್ ಸಿಂಗ್ ಎಂಬುವವರು ತಿಳಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ವೀಕ್ಷಿಸಲು ಕಳೆದ 5 ದಿನಗಳಿಂದ ಬೆಳಿಗ್ಗೆ 5 ಗಂಟೆಗೆ ಏಳುತ್ತಿರುವ ನೀವೆಲ್ಲರೂ, ನಿಮಗಾಗಿ (ಮತ್ತು ನನಗೂ) ಒಂದೇ ಒಂದು ಪದವಿದೆ... ಅದುವೇ ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್ ಎಂದು ಡಾ. ಖುಷ್ಬೂ ಎಂಬುವವರು ಹೇಳಿದ್ದಾರೆ.
ವಿರಾಟ್ ಮತ್ತು ರೋಹಿತ್ ಅವರ ಅದೇ ಹಳೆಯ ಕಥೆ... ಅವರು 1 ಪಂದ್ಯಕ್ಕೆ ವಿರಾಮ ತೆಗೆದುಕೊಂಡು 2025ರ ಮುಂದಿನ ಸರಣಿಯಲ್ಲಿ ತಾಜಾವಾಗಿ ಹಿಂತಿರುಗಬೇಕು ಎಂದು ನಾನು ಭಾವಿಸುತ್ತೇನೆ. ಜಾಹೀರಾತಿನ ಬದಲು ರಣಜಿ ಟ್ರೋಫಿಯತ್ತ ಗಮನ ಹರಿಸಬೇಕು ಎಂದು ಶ್ರೀಪಾಲ್ ಶಾ ಎನ್ನುವವರು ಕಿಡಿಕಾರಿದ್ದಾರೆ.