ಕ್ರಿಕೆಟ್

ಕನ್ನಡಿಗ ಮಯಾಂಕ್ ಅಗರ್ವಾಲ್ ಸಂಪೂರ್ಣ ಚೇತರಿಕೆ: ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆ

Srinivasamurthy VN

ಬೆಂಗಳೂರು: ವಿಮಾನದಲ್ಲಿ ವಿಷದ್ರಾವಣ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಕೊನೆಗೂ ಚೇತರಿಸಿಕೊಂಡಿದ್ದು, ಇದೀಗ ಕರ್ನಾಟಕ ರಣಜಿ ತಂಡಕ್ಕೂ ವಾಪಸ್ ಆಗಿದ್ದಾರೆ.

ಹೌದು.. ರಣಜಿ ಟ್ರೋಫಿ 2024ರ (Ranji Trophy) ತಮಿಳುನಾಡು ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal) ಕಾಣಿಸಿಕೊಂಡಿದ್ದಾರೆ. ಅಂದರೆ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಮಯಾಂಕ್ ಇದೀಗ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದಾರೆ.

ಈ ಹಿಂದೆ ತ್ರಿಪುರಾ ವಿರುದ್ಧದ ಪಂದ್ಯದ ಬಳಿಕ ಸೂರತ್​ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಯಾಂಕ್​ ಅಗರ್ವಾಲ್ ಅನಾರೋಗ್ಯಕ್ಕೆ ಒಳಗಾಗಿದ್ದರು. ವಿಮಾನದಲ್ಲಿ ಇರಿಸಲಾಗಿದ್ದ ವಿಷಕಾರಿ ದ್ರವವನ್ನು ಕುಡಿದಿದ್ದರಿಂದ ಅವರು ಅಸ್ವಸ್ಥಗೊಂಡಿದ್ದರು. ಅಲ್ಲದೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ಬಳಿಕ ಮಯಾಂಕ್ ತ್ರಿಪುರಾದಿಂದ ನೇರವಾಗಿ ಬೆಂಗಳೂರಿಗೆ ಮರಳಿದ್ದರು. ಅಲ್ಲದೆ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಮಯಾಂಕ್ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಮಯಾಂಕ್ ಅಗರ್ವಾಲ್ ಅವರು ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದಿದ್ದು, ಅವರು "ಫಿಟ್ ಮತ್ತು ಫೈನ್ ಮತ್ತು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಮುಂದಿನ ಪಂದ್ಯಕ್ಕೆ ಲಭ್ಯರಾಗುವ ಎಲ್ಲ ಸಾಧ್ಯತೆ ಗಳಿವೆ ಎಂದು ತಂಡ ಮೂಲಗಳು ತಿಳಿಸಿವೆ.

ಇನ್ನು ವಿಮಾನದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತಂಡದ ಮ್ಯಾನೇಜರ್ ದೂರು ನೀಡಿದ್ದು, ಪೊಲೀಸ್ ಅಧೀಕ್ಷಕ (ತ್ರಿಪುರ ಪಶ್ಚಿಮ) ಕೆ ಕಿರಣ್ ಕುಮಾರ್ ಅವರಿಗೆ ಲಿಖಿತ ದೂರನ್ನು ನೀಡಲಾಗಿದೆ ಮತ್ತು ಅಗರ್ತಲಾದ ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 

SCROLL FOR NEXT