ನತಾಶಾ ಸ್ಟಾಂಕೋವಿಕ್ - ಹಾರ್ದಿಕ್ ಪಾಂಡ್ಯ
ನತಾಶಾ ಸ್ಟಾಂಕೋವಿಕ್ - ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2024: ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ; ಹಾರ್ದಿಕ್ ಪಾಂಡ್ಯ ಪತ್ನಿಗೂ ಟ್ರೋಲರ್ಸ್ ಕಾಟ!

Ramyashree GN

ಐಪಿಎಲ್ 2024ರ ಆವೃತ್ತಿಯಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡ ಸೋಲು ಕಂಡಿದೆ. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಭಾರಿ ಸೋಲು ಅನುಭವಿಸಿದೆ. ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಈಗಾಗಲೇ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ತಂಡವು ಎರಡೂ ಪಂದ್ಯಗಳಲ್ಲಿ ಸೋಲು ಕಂಡ ನಂತರ, ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರನ್ನು ಟ್ರೋಲರ್ಸ್‌ಗಳು ಗುರಿಯಾಗಿಸಿಕೊಂಡಿದ್ದಾರೆ.

ಈ ಮೊದಲು ತಂಡವು ಗುಜರಾತ್ ಟೈಟಾನ್ಸ್‌ ವಿರುದ್ಧ ಸೋಲು ಕಂಡಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡ ಸೋಲು ಕಾಣುತ್ತಿರುವುದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. ಯಶಸ್ವಿ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಫ್ರಾಂಚೈಸಿ ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಸುದ್ದಿಯಲ್ಲಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಐದು ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಗುಜರಾತ್ ಟೈಟಾನ್ಸ್ ವಿರುದ್ಧದ ಅಲ್ಪ ಪ್ರಮಾಣದ ಸೋಲು ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 277 ರನ್‌ಗಳನ್ನು ಬಿಟ್ಟುಕೊಟ್ಟು 31 ರನ್‌ಗಳ ಅಂತರದಿಂದ ಸೋಲು ಕಂಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳು ಮತ್ತು ತಜ್ಞರಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ಈಮಧ್ಯೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಪ್ರಯತ್ನಿಸಿದರು. ಈ ಪಂದ್ಯಾವಳಿಯಲ್ಲಿ 'ಕಠಿಣ ಸೈನಿಕರು ಕಠಿಣ ಪರೀಕ್ಷೆಯನ್ನು ಎದುರಿಸುತ್ತಾರೆ' ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಹಾರ್ದಿಕ್ ತಮ್ಮ ತಂಡವನ್ನು 'ಕೆಟ್ಟ ಅಥವಾ ಒಳ್ಳೆಯ' ಸಂದರ್ಭಗಳಲ್ಲಿಯೂ ಒಟ್ಟಿಗೆ ಇರೋಣ ಮತ್ತು ಪರಸ್ಪರ ಸಹಾಯ ಮಾಡಬೇಕು ಎಂದು ತಂಡವನ್ನು ಕೇಳಿಕೊಂಡಿದ್ದಾರೆ.

ಮುಂಬೈ 277 ರನ್ ಬಿಟ್ಟುಕೊಟ್ಟರೂ ಪಂದ್ಯ ತುಂಬಾ ರೋಚಕವಾಗಿತ್ತು. ಮುಂಬೈ ತಮ್ಮ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು ಎಂದು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

'ಎರಡನೇ ಇನಿಂಗ್ಸ್‌ನಲ್ಲಿ 277 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ, 10 ಓವರ್‌ಗಳಲ್ಲಿಯೇ 150 ರನ್ ಗಳಿಸಿತ್ತು. ಆಗಿನ್ನು ಯಾರು ವಿಜೇತರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಟವು ತುಂಬಾ ರೋಚಕವಾಗಿತ್ತು. ಅಷ್ಟು ದೊಡ್ಡ ಮೊತ್ತದ ಗುರಿಯನ್ನು ಬೆನ್ನತ್ತಿದ್ದು ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇವೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಆದ್ದರಿಂದ, ನಾವು ಒಟ್ಟಿಗೆ ಇರೋಣ, ಗಟ್ಟಿಯಾಗಿರೋಣ. ಕಠಿಣ ಕ್ಷಣಗಳು ಬರಲಿವೆ. ನಾವು ಒಟ್ಟಾಗಿ ಅದನ್ನು ಎದುರಿಸೋಣ' ಎಂದು ತೆಂಡೂಲ್ಕರ್ ಹೇಳಿದರು.

SCROLL FOR NEXT