T20 ವಿಶ್ವಕಪ್ 2024 ಪಂದ್ಯಾವಳಿಗೆ ಭಾರತ ತಂಡವನ್ನು ಘೋಷಣೆ ಮಾಡಲಾಗಿದ್ದು, ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಯ್ಕೆಯಾಗಿದ್ದು ಮಾತ್ರವಲ್ಲದೆ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಕುರಿತು ಕ್ರಿಕೆಟ್ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದ್ದು, ಒತ್ತಡಕ್ಕೆ ಮಣಿದು ಅವರನ್ನು ಆಯ್ಕೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗಳು ಎದ್ದಿವೆ. ಉತ್ತಮ ಫಾರ್ಮ್ನಲ್ಲಿರುವ ಶುಭಮನ್ ಗಿಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರನ್ನು ಕೈಬಿಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಆ ಸಮಯದಲ್ಲಿ ಯಾವುದೇ ಉತ್ತಮ ಆಯ್ಕೆಗಳು ಲಭ್ಯವಿಲ್ಲದ ಕಾರಣ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಆರಂಭದಲ್ಲಿ ವಿವರಿಸಿದರು. ಆದಾಗ್ಯೂ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಲೇಬೆಕೆಂಬ ಒತ್ತಡದಲ್ಲಿ ಆಯ್ಕೆ ಸಮಿತಿ ಸಿಲುಕಿತ್ತು ಎಂದು ವರದಿಯಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇದೀಗ ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಮಾತನಾಡಿದ್ದು, ಐಪಿಎಲ್ ಫಾರ್ಮ್ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಮಾತುಕತೆಯಲ್ಲಿ, ಶಾ ಅವರು T20 ವಿಶ್ವಕಪ್ನ ಪಂದ್ಯಾವಳಿಗಾಗಿ ಆಯ್ಕೆ ಸಮಿತಿಯು ತಂಡಕ್ಕೆ ಆಟಾಗಾರರನ್ನು ಆಯ್ಕೆಮಾಡುವಾಗ ಸಾಗರೋತ್ತರ ಅನುಭವವನ್ನು ಸಹ ಗಣನೆಗೆ ತೆಗೆದುಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು.
ಇದು ಫಾರ್ಮ್ ಮತ್ತು ಅನುಭವದ ನಡುವೆ ಉತ್ತಮ ಸಮತೋಲನವನ್ನು ಹೊಂದಿದೆ. ಆಯ್ಕೆದಾರರು ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಸಾಗರೋತ್ತರ ಅನುಭವವೂ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಥವಾ ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯ ಪರವಾಗಿಲ್ಲ ಎಂದು ದೈನಿಕ್ ಜಾಗರಣ್ ವರದಿಯಲ್ಲಿ ಹೇಳಲಾಗಿದೆ. 'ಒತ್ತಡ'ದಲ್ಲಿ ಹಾರ್ದಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದು ಸನ್ನಿವೇಶದ ಒತ್ತಡವೋ (ಅವರು ಭಾರತದ ಅಗ್ರ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವುದರಿಂದ) ಅಥವಾ ಕೆಲವು ಕಡೆಯಿಂದ ಬಂದ ಒತ್ತಡವೋ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಅಹಮದಾಬಾದ್ನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಕೆಲವು ಆಯ್ಕೆದಾರರು ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಸದ್ಯ ಭಾರತ ತಂಡದಲ್ಲಿ ಹಾರ್ದಿಕ್ರಂತಹ ಕೌಶಲ್ಯ ಹೊಂದಿರುವ ವೇಗದ ಬೌಲಿಂಗ್ ಆಲ್ರೌಂಡರ್ ಇಲ್ಲ. ಶಿವಂ ದುಬೆ ಹಾರ್ದಿಕ್ ಅವರಿಗೆ ಏಕೈಕ ಪರ್ಯಾಯವಾದರೂ, ಹಾರ್ದಿಕ್ ಅವರ ಕೌಶಲ್ಯಗಳಿಗೆ ಅವರು ಸರಿಹೋಗುವುದಿಲ್ಲ. T20 ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಪ್ಲೇಯಿಂಗ್ ಇಲೆವೆನ್ ಅನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.