IPL 2024 RR vs RCB: ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.ಇಂದು ಸಾಯಂಕಾಲ ಅಹಮದಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಆರ್ ಸಿಬಿ ಗೆಲ್ಲಬೇಕೆಂದು ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದರಿಂದ ಹಿಡಿದು ವಿವಿಧ ರೀತಿಯಲ್ಲಿ ಬಯಕೆ ವ್ಯಕ್ತಪಡಿಸುತ್ತಿದ್ದಾರೆ. ಆರ್ ಸಿಬಿ ಘೋಷಣೆ ಜೋರಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಮಾಲೀಕ ವಿಜಯ ಮಲ್ಯ ಆರ್ಸಿಬಿ ತಂಡಕ್ಕೆ ಶುಭಕೋರಿದ್ದಾರೆ. ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತದೆ ಎಂದು ನನ್ನ ಆಂತರಿಕ ಮನಸ್ಸು ಹೇಳುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, ನಾನು ಆರ್ಸಿಬಿ ಫ್ರಾಂಚೈಸಿ ಖರೀದಿಗಾಗಿ ಮತ್ತು ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದಾಗ, ಇದಕ್ಕಿಂತ ಉತ್ತಮ ಆಯ್ಕೆಗಳಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಇದೀಗ ಆರ್ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಯಾವುದೇ ಚಿಂತೆಯಿಲ್ಲದೆ ಮುನ್ನುಗ್ಗಿ...ಬೆಸ್ಟ್ ಆಫ್ ಲಕ್ ಎಂದು ಆರ್ಸಿಬಿ ತಂಡಕ್ಕೆ ಶುಭಕೋರಿದ್ದಾರೆ.
ಇದಕ್ಕೂ ಮುನ್ನ ಸಿಎಸ್ಕೆ ತಂಡವನ್ನು ಬಗ್ಗು ಬಡಿದು ಆರ್ಸಿಬಿ ಪ್ಲೇಆಫ್ ಪ್ರವೇಶಿಸಿದಾಗ ವಿಜಯ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಪ್ಲೇಆಫ್ಗೆ ಅರ್ಹತೆ ಪಡೆದಿದ್ದಕ್ಕಾಗಿ ಆರ್ಸಿಬಿಗೆ ಅಭಿನಂದನೆಗಳು. ನಿರಾಶಾದಾಯಕ ಆರಂಭದ ಹೊರತಾಗಿಯೂ ಸತತ ಗೆಲುವುಗಳ ಮೂಲಕ ಈ ಹಂತಕ್ಕೇರಿದೆ. ಇದೇ ಹಾದಿಯಲ್ಲಿ ಮುನ್ನುಗ್ಗಿ ಟ್ರೋಫಿ ಗೆಲ್ಲುವುದೊಂದೇ ಬಾಕಿ ಎಂದು ಎಕ್ಸ್ನಲ್ಲಿ ಆರ್ಸಿಬಿ ತಂಡದ ಮಾಜಿ ಮಾಲೀಕ ಬರೆದುಕೊಂಡಿದ್ದರು.
ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ವಿಜಯ ಮಲ್ಯ ಆರ್ಸಿಬಿ ತಂಡಕ್ಕೆ ಶುಭಕೋರಿದ್ದು, ಈ ಮೂಲಕ ಈ ಸಲ ರಾಯಲ್ ಚಾಲೆಂಜರ್ಸ್ ಹುಡುಗರು ಟ್ರೋಫಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಂಸ್ಥಾಪಕರು. 2008 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಬಿಡ್ಡಿಂಗ್ನಲ್ಲಿ ಮಲ್ಯ ಅವರು ಆರ್ಸಿಬಿ ತಂಡವನ್ನು ಬರೋಬ್ಬರಿ 455 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು.
ಆದರೆ 2016 ರಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಿ ಸಾಲದ ಸುಳಿಗೆ ಸಿಲುಕಿದ ವಿಜಯ ಮಲ್ಯ ಭಾರತದಿಂದ ಪಾಲಾಯನ ಮಾಡಿ, ಈಗ ಇಂಗ್ಲೆಂಡ್ನಲ್ಲಿ ನೆಲೆಸಿದ್ದಾರೆ.