ನವದೆಹಲಿ: ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಮತ್ತು ಹಿರಿಯ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಮತ್ತು ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗುವುದಿಲ್ಲ ಎಂದು ಪ್ರಧಾನಿಯವರೇ ಹಲವು ಬಾರಿ ಹೇಳಿರುವಾಗ ನೀವು ಹೇಗೆ ಜಿಗಿದು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತೀರಿ? ಎಂದು ಅವರು ಪಾಕ್ ವಿರುದ್ದ ಕ್ರಿಕೆಟ್ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಗೀಳು: ಭಾರತದಲ್ಲಿ ಕ್ರಿಕೆಟ್ ಅನ್ನು "ಗೀಳು" ಎಂದು ಕರೆದಿರುವ ಓವೈಸಿ, ಇತ್ತೀಚಿನ ಪಹಲ್ಗಾಮ್ ಭಯೋತ್ಪಾದನಾ ದಾಳಿಯು, ನನಗೆ ತೀವ್ರ ನೋವನ್ನುಂಟು ಮಾಡಿದೆ. ಆ ಘಟನೆಯು ಭಯಾನಕವಾಗಿದೆ. ಯಾರೇ ಆಗಲಿ ಅವರ ಪತ್ನಿಯರು ಮತ್ತು ಮಕ್ಕಳ ಮುಂದೆ ಗುಂಡು ಹಾರಿಸಿರುವುದು ನೋವಿನ ಸಂಗತಿ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವಾಗ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಭಾರತ ಏಕೆ ಆಡುತ್ತಿದೆ ಎಂದು ಕೇಳಿದಾಗ, ಇದಕ್ಕೆ ಉತ್ತರವು ಪಂದ್ಯಕ್ಕೆ ಅನುಮತಿ ನೀಡಿರುವ ಬಿಸಿಸಿಐ ಮತ್ತು ಸರ್ಕಾರದಲ್ಲಿದೆ ಎಂದು ಹೇಳಿದರು.
ಹಿಂದೂ ಭಯೋತ್ಪಾದನೆ ಇಲ್ಲ: ಶಾ ಹೇಳಿಕೆಗೆ ಕಿಡಿ
ಹಿಂದೂ ಭಯೋತ್ಪಾದನೆ ಎಂಬುದಿಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, "ಮಹಾತ್ಮಾ ಗಾಂಧಿಯನ್ನು ಕೊಂದವರು ಯಾರು? ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯನ್ನು ಕೊಂದವರು ಯಾರು? ದೆಹಲಿಯ ಬೀದಿಗಳಲ್ಲಿ ಸಿಖ್ಖರನ್ನು ಕೊಂದವರು ಯಾರು? ಛತ್ತೀಸ್ಗಢ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕೊಂದವರು ಯಾರು? ಭಯೋತ್ಪಾದನೆ ಹೊಸ ಧರ್ಮವಾಗಿ ಮಾರ್ಪಟ್ಟಿದ್ದು, ಈ ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ಎಲ್ಲಾ ಕೃತ್ಯಗಳನ್ನು ಮಾಡ್ತಾರೆ.ಮಹಾತ್ಮ ಗಾಂಧಿಯನ್ನು ಕೊಂದವರು ಯಾರು ಎಂಬುದನ್ನು ಅಮಿತ್ ಶಾ ಮರೆತಿರಬಹುದು. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆ" ಎಂದು ಅವರು ಹೇಳಿದರು.
ಇದಕ್ಕೂ ಮುನ್ನಾ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಉಗ್ರ ಭಾಷಣ ಮಾಡಿದ ಓವೈಸಿ, ವ್ಯಾಪಾರ ಮತ್ತು ನೀರಿನ ಒಪ್ಪಂದಗಳನ್ನು ಅಮಾನತುಗೊಳಿಸಿರುವಾಗ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವ ನಿರ್ಧಾರವನ್ನು ಪ್ರಶ್ನಿಸಿದರು.
"ನಿಮ್ಮ ಆತ್ಮಸಾಕ್ಷಿಯು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಡಲು ಅನುಮತಿ ನೀಡುತ್ತದೆಯೇ? ನೀವು ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಿದ್ದೀರಿ, ವಾಯುಪ್ರದೇಶವನ್ನು ಮುಚ್ಚಿದ್ದೀರಿ ಆದರೆ ನೀವು ಇನ್ನೂ ಕ್ರಿಕೆಟ್ ಆಡಲು ಸಿದ್ಧರಿದ್ದೀರಾ?" ಎಂದು ಟೀಕಾ ಪ್ರಹಾರ ನಡೆಸಿದ್ದರು.
ಪಹಲ್ಗಾಮ್ನಲ್ಲಿ ಭದ್ರತಾ ಲೋಪಕ್ಕೆ ಹೊಣೆ ಹೊತ್ತುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ ಓವೈಸಿ, ಭಾರೀ ಮಿಲಿಟರಿ ಸಿಬ್ಬಂದಿ ನಿಯೋಜನೆ ಹೊರತಾಗಿಯೂ ಭಯೋತ್ಪಾದಕರು ಹೇಗೆ ಪ್ರವೇಶಿಸಿ ನಾಗರಿಕರನ್ನು ಕೊಲ್ಲುತ್ತಾರೆ ಎಂದು ಪ್ರಶ್ನಿಸಿದರು. ಆರ್ಟಿಕಲ್ 370 ರದ್ದತಿಯ ಹೊರತಾಗಿಯೂ ಭಯೋತ್ಪಾದನೆ ತಡೆಗಟ್ಟುವಿಕೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.