ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಆಯ್ಕೆ ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದು ಈಗ ವರದಿಯೊಂದರ ಮೂಲಕ ಬಹಿರಂಗಗೊಂಡಿದೆ.
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಂಡದ ಆಯ್ಕೆ ಮತ್ತು ತಂಡ ಆಡುವ ತಂತ್ರದ ವಿಷಯಕ್ಕೆ ಬಂದಾಗ ಬಿಸಿಸಿಐ ಜೊತೆ ಸಮಾನ ಮನಸ್ಕನಾಗಿಲ್ಲ ಎಂಬುದು ಈ ವರದಿಯ ಸಾರಾಂಶ.
ಮೆಲ್ಬೋರ್ನ್ ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ನ 5 ನೇ ದಿನದ ಪಂದ್ಯದಲ್ಲಿ ಭಾರತ ಸೋತಿದ್ದು ಗಂಭೀರ್ ತಮ್ಮ ತಂಡದ ಆಟದ ರೀತಿಗೆ ಕೋಪಗೊಂಡಿದ್ದರು. ಈ ಬೆನ್ನಲ್ಲೇ ಪ್ರಕಟಗೊಂಡಿರುವ ವರದಿಯ ಪ್ರಕಾರ, ಆಸ್ಟ್ರೇಲಿಯ ಪ್ರವಾಸಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಮರು ಸೇರಿಸಿಕೊಳ್ಳುವುದರ ಪರವಾಗಿ ಗಂಭೀರ್ ಒಲವು ಇತ್ತು ಎಂಬುದು ಬಹಿರಂಗಗೊಂಡಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಭಾರತೀಯ ಡ್ರೆಸ್ಸಿಂಗ್ ಕೊಠಡಿಯೊಳಗೆ ಕೆಲವು ಸಮಯದಿಂದ ಭಿನ್ನಮತ ತಲೆದೋರಿದ್ದು, ತಂಡದ ಆಯ್ಕೆಯ ಮೇಲೆ ಅಶಾಂತಿ ಉಂಟಾಗಿದೆ ಎಂದು ಹೇಳಿದೆ.
ಆಸ್ಟ್ರೇಲಿಯ ವಿರುದ್ಧ ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ಗೂ ಮುನ್ನ ಪೂಜಾರ ಅವರನ್ನು ಆಯ್ಕೆ ಮಾಡುವಂತೆ ಗಂಭೀರ್ ಹಲವು ಬಾರಿ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ. ಆದರೆ, ಅವರ ಮನವಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಲಕ್ಷಿಸಿತ್ತು. ಭಾರತ ಪರ್ತ್ ಟೆಸ್ಟ್ ಗೆದ್ದ ನಂತರವೂ ಗಂಭೀರ್ ಪೂಜಾರ ಅವರನ್ನು ಸೇರಿಸಿಕೊಳ್ಳುವಂತೆ ಕೇಳುತ್ತಿದ್ದರು ಎನ್ನಲಾಗಿದೆ.
ಪೂಜಾರ ಅವರು 43.60 ರ ಸರಾಸರಿಯಲ್ಲಿ 103 ಟೆಸ್ಟ್ ಪಂದ್ಯಗಳ ಅನುಭವಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತದ ಹಿಂದಿನ ಎರಡು ಸರಣಿ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಿಂದ ಪೂಜಾರ ಭಾರತವನ್ನು ಪ್ರತಿನಿಧಿಸಲಿಲ್ಲ.
ಅಗ್ರ ಕ್ರಮಾಂಕದಲ್ಲಿ ಭಾರತ ಕ್ರಿಕೆಟ್ ತಂಡದ ಹೋರಾಟ-ಗೊಂದಲಗಳು ಈ ಸರಣಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಸರಣಿಗೂ ಮುನ್ನ ಪೂಜಾರ ತಂಡದಲ್ಲಿಲ್ಲ ಎಂದು ಆಸ್ಟ್ರೇಲಿಯಾ ಬೌಲರ್ ಜೋಶ್ ಹೇಜಲ್ವುಡ್ ನಿಟ್ಟುಸಿರು ಬಿಟ್ಟಿದ್ದು ಗಮನಾರ್ಹ ಅಂಶವಾಗಿದೆ.
ಗಂಭೀರ್ ಅವರ ಅಧಿಕಾರಾವಧಿಯನ್ನು ಇನ್ನಷ್ಟು ಸಮಸ್ಯೆಗಳು ಸುತ್ತುವರಿದಿವೆ. ಮಾಜಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾರ್ಗದರ್ಶಕರಾಗಿದ್ದ ಗಂಭೀರ್, ಆಸ್ಟ್ರೇಲಿಯಾ ಸರಣಿಗೆ ಆಡುವ ತಂಡವನ್ನು ನಿರ್ಧರಿಸುವಾಗ ಆಯ್ಕೆದಾರರು ಮತ್ತು ನಾಯಕರೊಂದಿಗೆ ಹಲವು ವಿಷಯಗಳಲ್ಲಿ ಒಪ್ಪಿಗೆ ಸೂಚಿಸಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಅವರೊಂದಿಗೆ ಹೋಗಲು ಗಂಭೀರ್ ನಿರ್ಧಾರ ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಸರ್ವಾನುಮತದಿಂದ ಇರಲಿಲ್ಲ ಎಂದು ವರದಿಯಾಗಿದೆ.
ಆಟಗಾರರು ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಫಲರಾದ ರೀತಿಯಲ್ಲಿ ಗಂಭೀರ್ ಹತಾಶೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.