ಕೆಎಲ್ ರಾಹುಲ್ 
ಕ್ರಿಕೆಟ್

'ಸಿದ್ಧರಾಗಿ'...: ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ; KL Rahul ವಿಚಾರದಲ್ಲಿ ಆಯ್ಕೆ ಸಮಿತಿ ಯೂ-ಟರ್ನ್!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೆಎಲ್ ರಾಹುಲ್ ಆಯ್ಕೆ ವಿಚಾರದ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿಲುವು ಬದಲಾಯಿಸಿಕೊಂಡಂತೆ ತೋರುತ್ತಿದೆ.

ಮುಂಬೈ: ಬಾರ್ಡರ್ ಗವಾಸ್ಕರ್ ಟ್ರೋಫಿ ಹೀನಾಯ ಸೋಲಿನ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದು, ಕನ್ನಡಿಗ KL Rahul ವಿಚಾರದಲ್ಲಿ ಆಯ್ಕೆ ಸಮಿತಿ 'ಯೂ ಟರ್ನ್' ಹೊಡೆದಿದೆ.

ಹೌದು.. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೆಎಲ್ ರಾಹುಲ್ ಆಯ್ಕೆ ವಿಚಾರದ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿಲುವು ಬದಲಾಯಿಸಿಕೊಂಡಂತೆ ತೋರುತ್ತಿದೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸದಂತೆ ಕೆಎಲ್ ರಾಹುಲ್ ಬಿಸಿಸಿಐನಿಂದ ವಿರಾಮ ಕೋರಿದ್ದರು ಮತ್ತು ಅಂತೆಯೇ ಆ ಮನವಿಯನ್ನು ಆಯ್ಕೆ ಸಮಿತಿ ಕೂಡ ಒಪ್ಪಿಕೊಂಡಿತು ಎಂದು ವರದಿಯಾಗಿತ್ತು. ಆದರೆ, ಈ ವಿಷಯದ ಬಗ್ಗೆ ಇದೀಗ ಹೊಸ ಬೆಳವಣಿಗೆ ನಡೆದಿದೆ.

ಬಿಸಿಸಿಐ ಆಯ್ಕೆ ಸಮಿತಿ ಇದೀಗ ಕೆಎಲ್ ರಾಹುಲ್ ಗೆ ಸಂದೇಶವೊಂದನ್ನು ರವಾನಿಸಿದ್ದು.. ಸಿದ್ದರಾಗಿರುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಲಭ್ಯವಿರುವಂತೆ ಸೂಚಿಸಿದೆ ಎನ್ನಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಅವರನ್ನು ತಂಡಕ್ಕೆ ಸೇರಿಸಲು ಉತ್ಸುಕವಾಗಿದೆ ಎನ್ನಲಾಗಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ವೈಫಲ್ಯದ ಹೊರತಾಗಿಯೂ ರಾಹುಲ್ ಗೆ ಬುಲಾವ್

ಇನ್ನು ಆರಂಭಿಕರಾಗಿ, ಮಧ್ಯಮ ಕ್ರಮಾಂಕದಲ್ಲಿ ಆಡುವ ಮತ್ತು ವಿಕೆಟ್ ಕೀಪರ್ ಕೂಡ ಆಗಿರುವ ರಾಹುಲ್ ಈ ಹಿಂದೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಅದಾಗ್ಯೂ ಆಸಿಸ್ ನೆಲದಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂದೆನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಒಟ್ಟು 5 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ರಾಹುಲ್ 30.66 ಸರಾಸರಿಯಲ್ಲಿ 276 ರನ್ ಗಳಿಸಿದ್ದಾರೆ. ಹೀಗಾಗಿ ಅವರ ಮೇಲೆ ಸಂಪೂರ್ಣ ವಿಶ್ವಾಸ ಇರಿಸಿರುವ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕೂ ಅವರನ್ನು ಪರಿಗಣಿಸಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಹಿರಿಯ ಆಟಗಾರನಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ ಎನ್ನಲಾಗಿದೆ.

ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಅಭ್ಯಾಸವನ್ನು ಪಡೆಯಲು ಬಿಸಿಸಿಐ ಈಗ ಏಕದಿನ ಸರಣಿಯಲ್ಲಿ ಆಡುವಂತೆ ರಾಹುಲ್ ಗೆ ಕೇಳಿಕೊಂಡಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ರಾಹುಲ್ ಗೆ ಪಂತ್, ಸಂಜು ಸ್ಯಾಮ್ಸನ್ ಪೈಪೋಟಿ

ಅದಾಗ್ಯೂ ಕೆಎಲ್ ರಾಹುಲ್ ಗೆ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಆಸಿಸ್ ಪ್ರವಾಸದಲ್ಲಿ ಪಂತ್ ಸತತ ವೈಫಲ್ಯದ ಹೊರತಾಗಿಯೂ ಒಂದೆರಡು ಗಮನಾರ್ಹ ಇನ್ನಿಂಗ್ಸ್ ಆಡಿದ್ದರು. ಅಂತೆಯೇ ಸಂಜು ಸ್ಯಾಮ್ಸನ್ ಕೂಡ ಈ ಹಿಂದಿನ ಟಿ20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಹೀಗಾಗಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಜೊತೆಗೆ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ಸ್ಪರ್ಧಿಸುವಂತಾಗಿದೆ. ಅಂತೆಯೇ ಚಾಂಪಿಯನ್ಸ್ ಟ್ರೋಫಿ ಆಯ್ಕೆಗೆ ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮುಂತಾದ ಹಲವಾರು ಹೆಸರುಗಳು ಸ್ಪರ್ಧೆಯಲ್ಲಿವೆ ಆದರೆ ಈ ವಿಷಯದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ.

ತಂಡ ಘೋಷಣೆಗೆ ಸಮಯ ಕೇಳಿದ ಬಿಸಿಸಿಐ

ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಂಡ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೆಚ್ಚುವರಿ ಸಮಯಾವಕಾಶ ಕೋರಿದೆ ಎನ್ನಲಾಗಿದೆ. ತಾತ್ಕಾಲಿಕ ತಂಡ ಘೋಷಣೆಗೆ ICC ಜನವರಿ 12 ರ ಗಡುವನ್ನು ನಿಗದಿಪಡಿಸಿತ್ತು, ಆದರೆ ಆ ವೇಳೆಗೆ ಮಂಡಳಿಯು ಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗಡುವು ವಿಸ್ತರಿಸುವಂತೆ ಬಿಸಿಸಿಐ ಕೋರಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT