ನವದೆಹಲಿ: ಭಾರತೀಯ ಕ್ರಿಕೆಟ್ನ ಅತಿದೊಡ್ಡ ಮ್ಯಾಚ್ ವಿನ್ನರ್ ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ತಮಗೆ ಕ್ಯಾನ್ಸರ್ ಬಂದಾಗ ತಾವು ಅನುಭವಿಸಿದ ಕರಾಳ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾನ್ವಿತ ಆಟಗಾರ ಯುವರಾಜ್ ಸಿಂಗ್ ಅವರ ಸ್ಪೂರ್ತಿದಾಯಕ ಕಥೆ ಹಲವಾರು ತಲೆಮಾರುಗಳ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ.
2007ರ ಟಿ 20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆಲ್ಲುವುದರಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡಿ ಭಾರತ ತಂಡಕ್ಕೆ ಮರಳುವವರೆಗೆ, ಯುವರಾಜ್ ಅವರ ಜೀವನವು ನಿಜವಾದ ಕ್ರಿಕೆಟ್ ನಾಯಕನ ಆತ್ಮಚರಿತ್ರೆಯಾಗಿದೆ.
ಅವರ ವೃತ್ತಿ ಕ್ರಿಕೆಟ್ ಜೀವನ ಮತ್ತು ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅದರ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗೆದ್ದುಬಂದ ಹೋರಾಟ ಎಂಥಹವರ ಎದೆಯನ್ನು ಝಲ್ ಎನಿಸುತ್ತದೆ. ಇದೇ ವಿಚಾರವಾಗಿ ಇದೀಗ ಮೊದಲ ಬಾರಿಗೆ ಯುವಿ ಮನಬಿಚ್ಚಿ ಮಾತನಾಡಿದ್ದಾರೆ.
ಯೂಟ್ಯೂಬ್ನಲ್ಲಿ ದಿ ಓವರ್ಲ್ಯಾಪ್ ಪಾಡ್ಕ್ಯಾಸ್ಟ್ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾಘನ್ ಅವರೊಂದಿಗಿನ ಸಂಭಾಷಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಯುವರಾಜ್, ಕ್ಯಾನ್ಸರ್ ಅನ್ನು ಸೋಲಿಸಿ ಭಾರತ ತಂಡಕ್ಕೆ ಮರಳಿದ ಮತ್ತು ಮಾರಕ ಕಾಯಿಲೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದಾರೆ.
ಕ್ಯಾನ್ಸರ್ ಮತ್ತು ಹದಗೆಟ್ಟ ಆರೋಗ್ಯ
2011ರ ವಿಶ್ವಕಪ್ ಸಮಯದಲ್ಲಿ ಯುವರಾಜ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳನ್ನು ನೀಡಲು ನೋವು ಮತ್ತು ಅನುಮಾನಗಳನ್ನು ಎದುರಿಸಲು ಆಯ್ಕೆ ಮಾಡಿಕೊಂಡರು. ಆದಾಗ್ಯೂ, ವಿಶ್ವಕಪ್ ಮುಗಿದ ನಂತರ, ಮಾಜಿ ಆಲ್ರೌಂಡರ್ ತಮ್ಮ ಆರೋಗ್ಯ ಎಷ್ಟು ಹದಗೆಟ್ಟಿದೆ ಎಂದು ಅರಿತುಕೊಂಡರು.
ವೈದ್ಯರು 3 ರಿಂದ 6 ತಿಂಗಳು ಮಾತ್ರ ಸಮಯ ನೀಡಿದ್ದರು
ಈ ಬಗ್ಗೆ ಮಾತನಾಡಿದ ಯುವಿ, 'ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ನಿಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ನೀವು ಕಂದಕಕ್ಕೆ ಬೀಳುತ್ತೀರಿ. ನಾನು ದೆಹಲಿಯಲ್ಲಿದ್ದೆ. ನಾವು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದೆವು. ಗಂಗೂಲಿ ನಿವೃತ್ತರಾಗಿದ್ದರು ಮತ್ತು ನನ್ನ ಟೆಸ್ಟ್ ಸ್ಥಾನ ಆಗಷ್ಟೇ ತೆರೆದುಕೊಂಡಿತ್ತು. ಆ ಸ್ಥಾನಕ್ಕಾಗಿ ನಾನು ಏಳು ವರ್ಷಗಳಿಂದ ಕಾಯುತ್ತಿದ್ದೆ. ಆ ಸಂದರ್ಭದಲ್ಲೇ ಈ ಸಮಸ್ಯೆ ಇರುವಿಕೆ ತಿಳಿಯಿತು. ಆಗ ತುಂಬಾ ನೋವಿನಿಂದ ನಾನು ಸತ್ತರೂ ಪರವಾಗಿಲ್ಲ, ನನಗೆ ಆ ಸ್ಥಾನ ಬೇಕು' ಎಂದು ನಾನು ಹೇಳಿದೆ ಎಂದರು.
ಬಳಿಕ. 'ಆದರೆ ನಾನು ಇನ್ನಷ್ಟು ಅಸ್ವಸ್ಥನಾದೆ. ಈ ವೇಳೆ ಡಾ. ನಿತೇಶ್ ರೋಹತ್ಗಿ, ನಿಮ್ಮ ಹೃದಯ ಮತ್ತು ಶ್ವಾಸಕೋಶದ ನಡುವೆ ಕ್ಯಾನ್ಸರ್ ಗೆಡ್ಡೆ ಕುಳಿತಿದೆ. ನೀವು ಹೋಗಿ ಕ್ರಿಕೆಟ್ ಆಡಿದರೆ ನಿಮಗೆ ಹೃದಯಾಘಾತವಾಗಬಹುದು. ನೀವು ಕಿಮೊಥೆರಪಿ ಮಾಡಿಸದಿದ್ದರೆ ನೀವು ಮೂರರಿಂದ ಆರು ತಿಂಗಳು ಮಾತ್ರ ಬದುಕಬಹುದು ಎಂದು ಹೇಳಿದರು ಎಂದು ಯುವಿ ಹೇಳಿದರು.
ಚಿಕಿತ್ಸೆಗೆ ಅಮೆರಿಕಕ್ಕೆ ಪಯಣ
ಬಳಿಕ ಯುವರಾಜ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದಾಗ ಅವರು ಮತ್ತೆ ಎಂದಿಗೂ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಯಿತು. ಆದರೆ ಯುವಿ ತಮ್ಮಲ್ಲಿರುವ ಹೋರಟಗಾರನ ಮಾತ್ರ ಬಿಟ್ಟುಕೊಡಲಿಲ್ಲ. ಅವರಲ್ಲಿನ ಹಠಮಾರಿ ಸ್ವಭಾವ ಮತ್ತು ಭರವಸೆ ಅವರ ನಂಬಿಕೆ ಕಳೆದುಕೊಳ್ಳಲು ಬಿಡಲಿಲ್ಲ.
ಈ ಹಿಂದೆ "ಲ್ಯಾನ್ಸ್ ಆರ್ಮ್ಸ್ಟ್ರಾಂಗ್ಗೆ ಚಿಕಿತ್ಸೆ ನೀಡಿದ ಡಾ. ಐನ್ಹಾರ್ನ್ ಅವರನ್ನು ನೋಡಲು ನಾನು ಯುಎಸ್ಗೆ ಹೋಗಿದ್ದೆ. ನಾನು ಮತ್ತೆ ಎಂದಿಗೂ ಆಡದಿರಬಹುದು ಎಂಬ ಅಂಶವನ್ನು ಒಪ್ಪಿಕೊಳ್ಳಲು ಇಡೀ ವರ್ಷ ಬೇಕಾಯಿತು. ಮಾನಸಿಕವಾಗಿ, ಅದು ಕಷ್ಟಕರವಾಗಿತ್ತು. ನನ್ನನ್ನು ಪ್ರೇರೇಪಿಸಲು ನನಗೆ ಏನಾದರೂ ಅಗತ್ಯವಿತ್ತು. ನಾನು ಕ್ರಿಕೆಟ್ ಆಡದಿದ್ದರೆ, ನಾನು ಯಾರು? ನಾನು ಯಾರೂ ಅಲ್ಲ. ನಾನು ನಂಬಿದ್ದು ಅದನ್ನೇ" ಎಂದು ಯುವಿ ಹೇಳಿದರು.
ಕ್ರಿಕೆಟ್ ವಿಡಿಯೋ ನೋಡುತ್ತಿದ್ದ ಯುವಿ
ಚಿಕಿತ್ಸೆ ಪಡೆಯುತ್ತಿರುವಾಗ ಯುವರಾಜ್ ಕ್ರಿಕೆಟ್ ವೀಡಿಯೊಗಳನ್ನು ನೋಡುತ್ತಲೇ ಇದ್ದೆ ಎಂದು ಹೇಳಿದರು. ಈ ಅವಧಿಯಲ್ಲಿ, ಅನಿಲ್ ಕುಂಬ್ಳೆ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹವರು ಅವರನ್ನು ನೋಡಲು ಭೇಟಿ ನೀಡಿದರು. ಕುಂಬ್ಳೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಮತ್ತು ವೀಡಿಯೊಗಳನ್ನು ನೋಡುವ ಮೂಲಕ ಅವರ ಮನಸ್ಸಿನ ಮೇಲೆ ಒತ್ತಡ ಹೇರದಂತೆ ಸಲಹೆ ನೀಡಿದರು.
"ನಾನು ಹಳೆಯ ವೀಡಿಯೊಗಳನ್ನು ನೋಡುತ್ತಲೇ ಇದ್ದೆ. ಅನಿಲ್ ಕುಂಬ್ಳೆ ಅಮೆರಿಕಕ್ಕೆ ಬಂದು, ನನ್ನ ಲ್ಯಾಪ್ಟಾಪ್ ಮುಚ್ಚಿ, 'ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ, ಕ್ರಿಕೆಟ್ ವೀಡಿಯೊಗಳನ್ನು ನೋಡುವುದನ್ನು ನಿಲ್ಲಿಸಿ' ಎಂದು ಹೇಳಿದರು.
ಸಚಿನ್ ಇಂಗ್ಲೆಂಡ್ನಲ್ಲಿ ನನ್ನನ್ನು ನೋಡಲು ಬಂದರು. ಡಾ. ಐನ್ಹಾರ್ನ್ ನನಗೆ ಆತ್ಮವಿಶ್ವಾಸ ತುಂಬಿದರು; 'ನೀವು ಈ ಆಸ್ಪತ್ರೆಯಿಂದ ಹೊರನಡೆಯುವ ವ್ಯಕ್ತಿಯಾಗುತ್ತೀರಿ ಮತ್ತು ಮತ್ತೆ ಎಂದಿಗೂ ಕ್ಯಾನ್ಸರ್ ಬರುವುದಿಲ್ಲ ಎಂದು ವಿಶ್ವಾಸ ತುಂಬಿದರು. ಇದಾಗಿ ನಾನು ಹಿಂತಿರುಗಿ ಕೇವಲ ಆರೇ ತಿಂಗಳುಗಳಲ್ಲಿ ಭಾರತಕ್ಕಾಗಿ ಟಿ 20 ವಿಶ್ವಕಪ್ ಆಡಿದೆ. ನಾನು ನನ್ನ ಅತ್ಯುತ್ತಮ ಸ್ಥಿತಿಯಲ್ಲಿ ಇರಲಿಲ್ಲ, ಆದರೆ ನನಗೆ ಮ್ಯಾನ್ ಆಫ್ ದಿ ಮ್ಯಾಚ್ ಸಿಕ್ಕಿತು. ನಂತರ ನಾನು ಮತ್ತು ಜಹೀರ್ ಖಾನ್ ಬ್ರೈವ್ ಎಂಬ ದೂರದ ಪ್ರದೇಶದಲ್ಲಿ ಎರಡು ತಿಂಗಳ ಫಿಟ್ನೆಸ್ ತರಬೇತಿಗಾಗಿ ಫ್ರಾನ್ಸ್ಗೆ ಹೋದೆವು. ನಾವು ಫಿಟ್ ಆಗಿ ಹಿಂತಿರುಗಿದೆವು ಎಂದು ಯುವರಾಜ್ ಬಹಿರಂಗಪಡಿಸಿದರು.