ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ನೀವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಇದೀಗ ದೊಡ್ಡ ಬಲ ಸಿಕ್ಕಂತಾಗಿದೆ. ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೆಕೆಆರ್ ₹18 ಕೋಟಿಗೆ ಖರೀದಿಸಿದ ಮತೀಶಾ ಪತಿರಾಣಾಗೆ ಕೊನೆಗೂ ಶ್ರೀಲಂಕಾ ಕ್ರಿಕೆಟ್ (SLC) ನಿಂದ NOC ಸಿಕ್ಕಿದೆ ಎಂದು Revspotz ವರದಿ ಮಾಡಿದೆ.
2026ರ T20 ವಿಶ್ವಕಪ್ ಸಮಯದಲ್ಲಿ ಮತೀಶಾ ಪತಿರಾಣ ಗಾಯಗೊಂಡಿದ್ದರು. ಪಂದ್ಯಾವಳಿಯಲ್ಲಿ ಎರಡು ವಿಕೆಟ್ ಪಡೆದ ನಂತರ, ಅವರು ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಗುಂಪು ಹಂತದ ಪಂದ್ಯದಲ್ಲಿ ಕೇವಲ ನಾಲ್ಕು ಎಸೆತಗಳನ್ನು ಎಸೆದು ಪಂದ್ಯದಿಂದ ಹಿಂದೆ ಸರಿದಿದ್ದರು.
ಇದೀಗ ಶೀಘ್ರದಲ್ಲೇ ಮತೀಶಾ ಪತಿರಾಣ ಅವರು ಕೆಕೆಆರ್ ಸೇರುವ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದರೂ, ಕೋಲ್ಕತ್ತಾದ ಡ್ರೆಸ್ಸಿಂಗ್ ಕೋಣೆಯಲ್ಲಿ ಇನ್ನೂ ಅವರಿಗಾಗಿ ಕಾಯುವಿಕೆ ಮುಂದುವರಿದಿದೆ. 'ಪತಿರಾಣ ಅವರಿಗಾಗಿ ನಾವು ಕಾಯುತ್ತಿದ್ದೇವೆ. ನಮಗೆ ಶ್ರೀಲಂಕಾ ಕ್ರಿಕೆಟ್ (SLC) ಈ ಬಗ್ಗೆ ಮಾಹಿತಿ ನೀಡುತ್ತಿದೆ. ಅವರನ್ನು ಸಾಧ್ಯವಾದಷ್ಟು ಬೇಗ ಇಲ್ಲಿಗೆ ಕರೆತರಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ' ಎಂದು ಶೇನ್ ವ್ಯಾಟ್ಸನ್ IPL 2026ನೇ ಆವೃತ್ತಿಯ KKRನ ಮೊದಲ ಪಂದ್ಯಕ್ಕೂ ಮುನ್ನ ಹೇಳಿದರು.
ಕೆಕೆಆರ್ ಇದೀಗ ಸಂಕಷ್ಟದಲ್ಲಿದೆ. ಗಾಯದಿಂದಾಗಿ ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಪರಿಸ್ಥಿತಿ ಹದಗೆಟ್ಟ ನಂತರ ಬಿಸಿಸಿಐ ಸೂಚನೆ ಮೇರೆಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಬೇಕಾಯಿತು. ಇವರ ಬದಲಿಗೆ ನವದೀಪ್ ಸೈನಿ, ಸೌರಭ್ ದುಬೆ ಮತ್ತು ಬ್ಲೆಸಿಂಗ್ ಮುಜರಬಾನಿ ಅವರನ್ನು ಬದಲಿ ಆಟಗಾರರಾಗಿ ಬಂದಿದ್ದರೂ, ಕೆಕೆಆರ್ನ ಬೌಲಿಂಗ್ ಇಲ್ಲಿಯವರೆಗೆ ಸಾಮಾನ್ಯವಾಗಿತ್ತು. ಇದೀಗ ಮತೀಶಾ ಪತಿರಾಣ ಅವರ ಸೇರ್ಪಡೆಯು ತಂಡಕ್ಕೆ ಬಲ ತುಂಬಲಿದೆ.
ನೈಟ್ ರೈಡರ್ಸ್ ತಂಡವು ಮೂರು ಪಂದ್ಯಗಳನ್ನು ಸೋತಿದ್ದು, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಕೊನೆಯ ಪಂದ್ಯವು ಈಡನ್ ಗಾರ್ಡನ್ಸ್ನಲ್ಲಿ ಮಳೆಯಿಂದಾಗಿ ರದ್ದಾಯಿತು. ಇದೀಗ ತಂಡವು ಸದ್ಯ ಚೆಪಾಕ್ನಲ್ಲಿದ್ದು, ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಪತಿರಾಣ ಚೆನ್ನೈನಲ್ಲಿ ಕೆಕೆಆರ್ ಜೊತೆಗೆ ಸೇರುವ ಸಾಧ್ಯತೆಯಿದೆ. ಚೆನ್ನೈ ನಂತರ, ಕೆಕೆಆರ್ ಏಪ್ರಿಲ್ 17ರಂದು ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಎದುರಿಸಲು ಅಹಮದಾಬಾದ್ಗೆ ಪ್ರಯಾಣ ಬೆಳೆಸಲಿದೆ.