ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿದ ಬಳಿಕ ಆರ್ ಸಿಬಿ ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ, ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಅರ್ಧ ಶತಕವನ್ನು ಶ್ಲಾಘಿಸಿದರು.
ಶೂನ್ಯಕ್ಕೆ ಔಟಾಗಬೇಕಿದ್ದ ಕೊಹ್ಲಿ, ವಾಷಿಂಗ್ಟನ್ ಸುಂದರ್ ಅವರಿಂದ ಜೀವದಾನ ಪಡೆದ ನಂತರ ಕೇವಲ 44 ಎಸೆತಗಳಲ್ಲಿ 81 ರನ್ ಗಳಿಸುವುದರೊಂದಿಗೆ 206 ರನ್ ಗಳ ಚೇಸ್ ಮಾಡುವಲ್ಲಿ ನೆರವಾದರು.
ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರೂ ಕೊಹ್ಲಿ, ಗೆಲುವಿಗೆ ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ನ್ನು ಕೊಂಡಾಡಿದ್ದಾರೆ. ಅವರು 27 ಎಸೆತಗಳಲ್ಲಿ 55 ರನ್ ಗಳಿಸಿರುವುದು ಪಂದ್ಯದ ಗತಿ ಬದಲಿಸಿತು ಎಂದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೊಹ್ಲಿ, ನಿಜ ಹೇಳಬೇಕೆಂದರೆ, ಉತ್ತಮ ಬೌಲಿಂಗ್ ದಾಳಿ ಹೊಂದಿರುವ ತಂಡದ ವಿರುದ್ಧ 200ಕ್ಕೂ ಅಧಿಕ ರನ್ ಚೇಸ್ ಮಾಡುವುದು ಸುಲಭವಾಗಿರಲಿಲ್ಲ. ನಾವು ಸ್ಫೋಟಕ ಆಟದ ಜೊತೆ ಉತ್ತಮ ಜೊತೆಯಾಟ ಮುಖ್ಯವಾಗಿತ್ತು. ಮೊದಲ ವಿಕೆಟ್ ಬೀಳುತ್ತಿದ್ದಂತೆಯೇ ಕ್ರೀಸ್ ಗೆ ಬಂದ ಪಡಿಕ್ಕಲ್, ಸ್ಫೋಟಕ ಆಟಕ್ಕೆ ಮುಂದಾಗಿದ್ದು, ನಮ್ಮ ಮೇಲಿನ ಒತ್ತಡ ಕಡಿಮೆ ಮಾಡಿತು. ಅವರು ಮುಕ್ತವಾಗಿ ಬ್ಯಾಟಿಂಗ್ ಮಾಡಿದದ್ದು, ತಂಡಕ್ಕೆ ಉತ್ತಮ ಅಡಿಪಾಯವಾಯಿತು ಎಂದು ಹೇಳಿದರು.
ಕೊನೆ ಹಂತದಲ್ಲಿ ನಮ್ಮ ಬೌಲರ್ ಗಳು ಕೂಡಾ ಉತ್ತಮವಾಗಿ ಕಮ್ ಬ್ಯಾಕ್ ಮಾಡಿದರು. ಒಂದು ಹಂತದಲ್ಲಿ ಗುಜರಾತ್ 230-235 ರನ್ ಕಲೆಹಾಕುವ ಸಾಧ್ಯತೆಯಿತ್ತು. ಆದರೆ ನಮ್ಮ ಬೌಲರ್ ಗಳು ಅದಕ್ಕೆ ಆಸ್ಪದ ನೀಡದೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು ಎಂದರು.
ನಮ್ಮಲ್ಲಿ ಕೆಳ ಕ್ರಮಾಂಕದವರೆಗೂ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಇರುವುದು ಸಂತಸದ ವಿಚಾರ. ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಕೃಣಾಲ್ ಪಾಂಡ್ಯರಂತಹ ಆಟಗಾರರಿದ್ದಾರೆ. ಹಾಗಾಗಿ ನಾನು ಔಟ್ ಆದ ಬಳಿಕವೂ ಅವರು ಪಂದ್ಯ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇತ್ತು ಎಂದಿದ್ದಾರೆ.