ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ 
ಕ್ರಿಕೆಟ್

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಭದ್ರತಾ ಭೀತಿ!: RCB vs GT ಪಂದ್ಯದ ವೇಳೆ 240ಕ್ಕೂ ಹೆಚ್ಚು ಸಿಸಿಟಿವಿ ಫೀಡ್‌ಗಳ ಕಡಿತ!

ಆರೋಪಿಗಳು NVR ಘಟಕಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದಾಗಿ ಹಲವಾರು ಪ್ರವೇಶ ದ್ವಾರಗಳು ಮತ್ತು ಕೆಲವು ಪ್ರಮುಖ ಪ್ರದೇಶಗಳ ಕಣ್ಗಾವಲು ವ್ಯವಸ್ಥೆಗೆ ಅಡ್ಡಿಯಾಗಿದೆ.

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ದುರಂತ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿತ್ತು. ಆ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಭದ್ರತಾ ಭೀತಿ ಎದುರಾಗಿದೆ.

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಸಮಯದಲ್ಲಿ, ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ನಡುವಿನ ಪಂದ್ಯದ ವೇಳೆ ಭಯಾನಕ ಘಟನೆಯೊಂದು ಸಂಭವಿಸಿದೆ. ಡಿಜಿಟಲ್ ಸೇವಾ ಪೂರೈಕೆದಾರ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಕ್ರೀಡಾಂಗಣದ ಆವರಣಕ್ಕೆ ಪ್ರವೇಶಿಸಿ, ಸುಮಾರು 240 ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಏಪ್ರಿಲ್ 24 ರಂದು ಆರ್‌ಸಿಬಿ vs ಜಿಟಿ ಐಪಿಎಲ್ ಪಂದ್ಯದ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಹಾಳು ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆ ಇಬ್ಬರು NVR ಘಟಕಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದಾಗಿ ಹಲವಾರು ಪ್ರವೇಶ ದ್ವಾರಗಳು ಮತ್ತು ಕೆಲವು ಪ್ರಮುಖ ಪ್ರದೇಶಗಳ ಕಣ್ಗಾವಲು ವ್ಯವಸ್ಥೆಗೆ ಅಡ್ಡಿಯಾಗಿದೆ. ಬಳಿಕ ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲಾಗಿದ್ದರೂ, ಈ ಘಟನೆಯು ಮತ್ತೊಮ್ಮೆ ಕ್ರೀಡಾಂಗಣದ ಭದ್ರತೆ ಮತ್ತು ಕಾರ್ಯಾಚರಣೆಯ ಪ್ರೋಟೋಕಾಲ್‌ಗಳ ಕುರಿತು ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಗುರುಗ್ರಾಮ ಮೂಲದ AI ಸರ್ವೈಲೆನ್ಸ್ ಸಂಸ್ಥೆಯಾದ ಸ್ಟಾಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿ ಆದಿತ್ಯ ಭಟ್ ಔಪಚಾರಿಕ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದಂತೆ, 37 ವರ್ಷದ ಮಂಜುನಾಥ್ ಮತ್ತು 19 ವರ್ಷದ ಅಬ್ದುಲ್ ಕಲಾಂ ಎಂಬ ಇಬ್ಬರು ವ್ಯಕ್ತಿಗಳು ನಿರ್ಬಂಧಿತ ಸಿಸಿಟಿವಿ ನಿಯಂತ್ರಣ ಕೊಠಡಿಗೆ ಅನುಮತಿಯಿಲ್ಲದೆ ಪ್ರವೇಶಿಸಿ ಹಾನಿಯನ್ನುಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ತನಿಖೆಯ ನಂತರ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಉಪ ಗುತ್ತಿಗೆದಾರ ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್‌ನ ಇಬ್ಬರು ಉದ್ಯೋಗಿಗಳು ಕ್ರೀಡಾಂಗಣದ ಸಿಸಿಟಿವಿ ಸರ್ವರ್ ಕೋಣೆಗೆ ಅನಧಿಕೃತ ಪ್ರವೇಶ ಪಡೆದಿದ್ದಾರೆ. ಬೆಂಗಳೂರು ಪೊಲೀಸರು ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ದಂಧೆಯನ್ನು ಭೇದಿಸಿದ್ದು, ಅಧಿಕಾರಿಗಳು 100ಕ್ಕೂ ಹೆಚ್ಚು ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕ್ಯಾಂಟೀನ್ ಕೆಲಸಗಾರನನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ವರದಿಯಾಗಿದೆ.

ಹಾಲಿ ಚಾಂಪಿಯನ್‌ಗಳಾದ ಆರ್‌ಸಿಬಿ ಇಲ್ಲಿಯವರೆಗೆ ಉತ್ತಮ ಆವೃತ್ತಿಯನ್ನು ಹೊಂದಿದೆ. ಐಪಿಎಲ್ 2026 ರಲ್ಲಿ ಅವರು ಆಡಿದ 7 ಪಂದ್ಯಗಳಲ್ಲಿ, 5 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಐಪಿಎಲ್ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಏಪ್ರಿಲ್ 27 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಆಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯ ಸಿಗುತ್ತೆ ಅನ್ನೋ ನಂಬಿಕೇನೆ ಇಲ್ಲ.. ಸತ್ಯಾಗ್ರಹ ಕೂರ್ತೀನಿ': ನ್ಯಾಯಮೂರ್ತಿಗಳ ವಿರುದ್ಧವೇ Arvind Kejriwal ರಣಕಹಳೆ!

ರಾಜನಾಥ್ ಸಿಂಗ್ ದೇಶದ ಮುಂದಿನ ರಾಷ್ಟ್ರಪತಿ? ಜೂನ್ ನಲ್ಲಿ ನೇಮಕ ಸಾಧ್ಯತೆ

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು

IPL 2026: LSG vs KKR ಸ್ಫೋಟಕ ಆಟ.. ಇತಿಹಾಸ ಬರೆದ Rinku Singh, 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟ

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

SCROLL FOR NEXT