ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿ ಭಾರತದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡ ಅನುಭವದ ಕುರಿತು ಇಂಗ್ಲೆಂಡ್ ಕ್ರಿಕೆಟ್ ತಂಡದ ಯುವ ಆಟಗಾರ ಜೋರ್ಡಾನ್ ಕಾಕ್ಸ್ ಮಾತನಾಡಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಪರ ಒಂದೇ ಒಂದು ಪಂದ್ಯವನ್ನೂ ಆಡದಿದ್ದರೂ, ವಿರಾಟ್ ಅವರೊಂದಿಗೆ ಸಮಯ ಕಳೆಯುವ ಅವಕಾಶ ಕಾಕ್ಸ್ ಅವರಿಗೆ ಸಿಕ್ಕಿತು. ತಮಗೆ ಯಾವುದೇ ಸಂದೇಹಗಳಿದ್ದಾಗಲೂ ವಿರಾಟ್ ಕೊಹ್ಲಿ ಯಾವಾಗಲೂ ಕೇವಲ ಒಂದು ಕರೆ ಅಥವಾ ಸಂದೇಶದ ಅಂತರದಲ್ಲಿ ಲಭ್ಯವಿರುತ್ತಾರೆ. ವಿವಿಧ ವಿಷಯಗಳ ಕುರಿತು ಕೊಹ್ಲಿಯಿಂದ ಸಲಹೆ ಪಡೆಯಲು ತನೆ ಇಷ್ಟ. ದೊಡ್ಡ ಪಂದ್ಯಗಳ ಸಂದರ್ಭದಲ್ಲಿ ಎದುರಾಗುವ ಒತ್ತಡವನ್ನು ಹೇಗೆ ಸ್ವೀಕರಿಸಬೇಕು ಎಂದು ಕೊಹ್ಲಿ ತಮಗೆ ನೀಡಿದ ಸಲಹೆಯನ್ನೂ ಈ ವೇಳೆ ನೆನಪಿಸಿಕೊಂಡರು.
'ನಾನು ಬಹುಶಃ ಅವೆಲ್ಲವನ್ನೂ ಹಂಚಿಕೊಳ್ಳಲು ಬಯಸುವುದಿಲ್ಲ, ಆದರೆ ನಾನು ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದ್ದೆ. ಅವರು, 'ಈ ಕ್ಷಣವನ್ನು ಆನಂದಿಸಿ. ನಿಮಗೆ ಸಿಗುವುದು ಒಂದೇ ಒಂದು ಪದಾರ್ಪಣೆ (debut). ಹಾಗಾಗಿ ಅದನ್ನು ಆನಂದಿಸಿ ಮತ್ತು ಖುಷಿಪಡಿ' ಎಂದು ಹೇಳುತ್ತಿದ್ದರು' ಎಂದು ಕಾಕ್ಸ್ ಬಿಬಿಸಿ ಸ್ಪೋರ್ಟ್ಗೆ ತಿಳಿಸಿದರು.
'ನಿಮ್ಮ ಕುಟುಂಬ ಮತ್ತು ಸ್ನೇಹಿತರು — ಅವರು ನಿಮಗಾಗಿ ಪಟ್ಟ ಶ್ರಮ ಹಾಗೂ ನಿಮ್ಮ ಪಂದ್ಯಗಳನ್ನು ವೀಕ್ಷಿಸಲು ಮತ್ತು ನಿಮ್ಮನ್ನು ಬೆಂಬಲಿಸಲು ಅವರು ನೀಡಿದ ಸಮಯ — ಇವೆಲ್ಲವನ್ನೂ ನೆನಪಿಸಿಕೊಳ್ಳಿ; ಅವರೆಲ್ಲರೂ ನಿಮಗಾಗಿ ಅಂತಹ ತ್ಯಾಗಗಳನ್ನು ಏಕೆ ಮಾಡಿದರು ಎಂಬುದನ್ನು ನಿಮ್ಮ ಆಟದ ಮೂಲಕ ಅವರಿಗೆ ತೋರಿಸಿ. ಈ ವಿಷಯವನ್ನು ನಾನು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಅವರು ನಾನು ಗೌರವಿಸುವ ಮತ್ತು ಆದರ್ಶವಾಗಿ ಕಾಣುವ ವ್ಯಕ್ತಿ; ಭಾರತದಲ್ಲಿ ಅವರೊಂದಿಗೆ ಸುಮಾರು ನಾಲ್ಕು ತಿಂಗಳ ಕಾಲ ಕಳೆಯುವ ಅವಕಾಶ ನನಗೆ ಸಿಕ್ಕಿತ್ತು. ನನಗೆ ಬೇಸರವಾದಾಗ ಅಥವಾ ಸಹಾಯದ ಅಗತ್ಯವಿದ್ದಾಗ ನಾನು ಅವರಿಗೆ ಸಂದೇಶ ಕಳುಹಿಸುತ್ತೇನೆ; ಅವರು ಕರೆ ಮಾಡಿದರೆ ಯಾವಾಗಲೂ ಸಿಗುವಂತಹ ವ್ಯಕ್ತಿ' ಎಂದು ಅವರು ಹೇಳಿದರು.
ನ್ಯೂಜಿಲೆಂಡ್ನಲ್ಲಿನ ತಮ್ಮ ಟೆಸ್ಟ್ ಪದಾರ್ಪಣೆಯು ಗಾಯದ ಸಮಸ್ಯೆಯಿಂದಾಗಿ ವಿಳಂಬವಾದಾಗ ಕಾಕ್ಸ್, ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಹಿನ್ನಡೆಯು ಇಂಗ್ಲೆಂಡ್ನ ಈ ಕ್ರಿಕೆಟಿಗನ ಮೇಲೆ ತೀವ್ರ ಪರಿಣಾಮ ಬೀರಿತ್ತಾದರೂ, ಕೊಹ್ಲಿ ನೀಡಿದ ಸಲಹೆಯು ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ನೆರವಾಯಿತು.
'ನನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಲು ಕೇವಲ ಮೂರು ದಿನಗಳಷ್ಟೇ ಬಾಕಿ ಇರುವಾಗ ನನಗೆ ಗಾಯವಾಯಿತು; ಅದು ನಿಜಕ್ಕೂ ದುರದೃಷ್ಟಕರ ಹಾಗೂ ಅನಿರೀಕ್ಷಿತ ಘಟನೆಯಾಗಿತ್ತು. 'ನಾನಿನ್ನು ಎಂದಿಗೂ ಆಡುವುದಿಲ್ಲವೇನೋ' ಎಂಬ ಆಲೋಚನೆಗಳು ಖಂಡಿತವಾಗಿಯೂ ನನ್ನ ಮನಸ್ಸಿನಲ್ಲಿ ಮೂಡಿದ್ದವು. ಟೆಸ್ಟ್ ಕ್ಯಾಪ್ ಪಡೆಯುವ ಅವಕಾಶ ನನ್ನ ಕೈಗೆ ಬಂದಿತ್ತಾದರೂ, ಅಂತಿಮವಾಗಿ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ. ಕೇಳಲು ಕಠೋರವೆನಿಸಿದರೂ, ಅದು ನನ್ನ ವೃತ್ತಿಜೀವನದ ಅಂತ್ಯವೇನೋ ಎಂಬ ಭಾವನೆ ಮೂಡಿತ್ತು. ಈ ಬಗ್ಗೆ ನಾನು ವಿರಾಟ್ ಅವರೊಂದಿಗೆ ಮಾತನಾಡಿದ್ದು ನನಗೆ ನೆನಪಿದೆ. ಅವರು ಹೀಗೆಂದಿದ್ದರು: 'ನಾನು ಯಾರೆಂದೇ ತಿಳಿಯದ ಕೋಟ್ಯಂತರ ಜನರಿದ್ದಾರೆ. ಬೆಳಿಗ್ಗೆ ಸೂರ್ಯ ಉದಯಿಸಿಯೇ ತೀರುತ್ತಾನೆ - ಹಾಗಾಗಿ, ಆ ವಿಷಯಗಳ ಬಗ್ಗೆ ನಾನೇನೂ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಕಾಕ್ಸ್ ತಿಳಿಸಿದರು.
'ಅವರು ಮೈದಾನಕ್ಕೆ ಇಳಿದಾಗ ಖಂಡಿತವಾಗಿಯೂ ಆಟದ ಬಗ್ಗೆ ಅಪಾರ ಕಾಳಜಿ ಹೊಂದಿರುತ್ತಾರೆ. ಏಕೆಂದರೆ ಅಲ್ಲಿ ಅವರು ಅಷ್ಟೊಂದು ತೀವ್ರವಾಗಿ ವರ್ತಿಸುತ್ತಾರೆ. ಆದರೆ ಮೈದಾನದಿಂದ ಹೊರಬಂದಾಗ, ಅವರು ನೀವು ಭೇಟಿಯಾಗುವ ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ. 'ನಾನು ಕೂಡ ಹೇಗೆ ಹಾಗೆ ಆಗಬಹುದು? ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡುತ್ತಲೇ, ಹೊರಬಂದಾಗ ಎಲ್ಲರೂ ನನ್ನನ್ನು 'ಅವರು ತುಂಬಾ ಒಳ್ಳೆಯ ವ್ಯಕ್ತಿ' ಎಂದು ಹೇಳುವಂತಾಗುವುದು ಹೇಗೆ?' ಎಂಬುದು ಮುಖ್ಯವಾದ ವಿಷಯ' ಎಂದು ಹೇಳಿದರು.