ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತಿಮ ಕ್ಷಣಗಳಲ್ಲಿ ಅಂಪೈರ್ಗಳ ನಿರ್ಧಾರ ಭಾರಿ ವಿವಾದಕ್ಕೆ ಕಾರಣವಾಯಿತು.
ಹೌದು.. ಕೊಲಂಬೊದ ಸಿಂಹಳೀಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯದ ವೇಳೆ ವಿವಾದವೊಂದು ಸುದ್ದಿಗೆ ಗ್ರಾಸವಾಗಿದ್ದು, ಮೈದಾನದಲ್ಲಿ ಬೆಳಕು ಮಂದವಾಗಿದ್ದರೂ ಆಟ ಮುಂದುವರಿಸಲು ಅಂಪೈರ್ಗಳು ಅವಕಾಶ ನೀಡಿದ್ದಕ್ಕೆ ಶ್ರೀಲಂಕಾ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಭಾರತ 9 ವಿಕೆಟ್ಗೆ 503 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ ಬಳಿಕ ಶ್ರೀಲಂಕಾ ಬ್ಯಾಟಿಂಗ್ಗೆ ಇಳಿಯಿತು. ಈ ವೇಳೆ ಮಳೆಯಿಂದಾಗಿ ಪಂದ್ಯ ಕೆಲಹೊತ್ತು ಸ್ಥಗಿತವಾಯಿತು. ಈ ವೇಳೆ ಅಂಪೈರ್ ಗಳು ದಿನದಾಟ ಅಂತ್ಯವೆಂದು ಘೋಷಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅಂಪೈರ್ ಗಳು ಆಟ ಮುಂದುವರೆಸಿದ್ದರು. ದಿನದಾಟಕ್ಕೆ ಕೆಲವೇ ಓವರ್ಗಳು ಬಾಕಿ ಇದ್ದ ಸಂದರ್ಭದಲ್ಲಿ ಪ್ರಸಿದ್ಧ ಕೃಷ್ಣ ಅವರು ಲಹಿರು ಉದಾರ ಅವರನ್ನು ಕೇವಲ 1 ರನ್ಗೆ ಔಟ್ ಮಾಡಿದರು.
ಬಳಿಕ ಅಂತಿಮ ಎಸೆತದಲ್ಲಿ ಮನು ಸುತ್ತಾರ್ ಅವರ ಬೌಲಿಂಗ್ನಲ್ಲಿ ಪ್ರಭಾತ್ ಜೈಸೂರ್ಯ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಈ ವಿಕೆಟ್ಗೂ ಮುನ್ನವೇ ಅಂಪೈರ್ಗಳು ಬೆಳಕಿನ ಪ್ರಮಾಣವನ್ನು ಪರಿಶೀಲಿಸಿದ್ದರು. ಬೆಳಕು ಕಡಿಮೆಯಾಗಿದ್ದರೂ ಆಟ ಮುಂದುವರಿಸಲು ನಿರ್ಧರಿಸಿದ್ದರು. ಈ ನಿರ್ಧಾರಕ್ಕೆ ಜೈಸೂರ್ಯ ಹಾಗೂ ಕಮಿಲ್ ಮಿಶಾರಾ ಅಸಮಾಧಾನ ವ್ಯಕ್ತಪಡಿಸಿದರೂ, ಅಂಪೈರ್ಗಳು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಇದರಿಂದ ಅವರು ಅಸಮಾಧಾನಗೊಂಡಿದ್ದರು.
ಅಂಪೈರ್ಗಳತ್ತ ಪದೇ-ಪದೇ ನೋಡಿದ ಜೈಸೂರ್ಯ
ಔಟಾಗಿ ಮೈದಾನದಿಂದ ಹೊರನಡೆಯುತ್ತಿದ್ದ ಜೈಸೂರ್ಯ ಸ್ಪಷ್ಟವಾಗಿ ಕೋಪಗೊಂಡಂತೆ ಕಂಡುಬಂದರು. ಪೆವಿಲಿಯನ್ನತ್ತ ತೆರಳುವಾಗ ಅವರು ಪದೇಪದೇ ಅಂಪೈರ್ಗಳತ್ತ ತಿರುಗಿ ನೋಡುತ್ತಿದ್ದರು. ಶ್ರೀಲಂಕಾ ಡ್ರೆಸ್ಸಿಂಗ್ ರೂಮ್ ತಲುಪಿದ ಬಳಿಕ ಜೈಸೂರ್ಯ ತಮ್ಮ ಗ್ಲೌಸ್ಗಳನ್ನು ಕೋಪದಿಂದ ಎಸೆದರು.
ಕಿವಿಲಿ ಹೊಗೆ ಬರುತ್ತಿದೆ
ಇನ್ನು ಇದೇ ಸಂದರ್ಭದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್, “ಪ್ರಭಾತ್ ಜೈಸೂರ್ಯ ಅವರನ್ನು ನೋಡಿ... ಅವರ ಕಿವಿಗಳಿಂದಲೇ ಹೊಗೆ ಬರುತ್ತಿರುವಂತಿದೆ” ಎಂದು ಹೇಳಿದರು.
ಶ್ರೀಲಂಕಾ 8/2: 495 ರನ್ಗಳ ಭಾರಿ ಹಿನ್ನಡೆ
ಎರಡನೇ ದಿನದಾಟ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ಕಳೆದುಕೊಂಡು ಕೇವಲ 8 ರನ್ ಗಳಿಸಿದೆ. ಲಹಿರು ಉದಾರ 1 ರನ್ ಗಳಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರೆ, ಪ್ರಭಾತ್ ಜೈಸೂರ್ಯ 2 ರನ್ ಗಳಿಸಿ ಮನು ಸುತ್ತಾರ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆದರು.
ಕಮಿಲ್ ಮಿಶಾರಾ 5 ರನ್ ಗಳಿಸಿ ಅಜೇಯರಾಗಿದ್ದರು. ಭಾರತ ಮೊದಲ ಇನಿಂಗ್ಸ್ನಲ್ಲಿ 503 ರನ್ ಗಳಿಸಿರುವುದರಿಂದ ಶ್ರೀಲಂಕಾ ಇನ್ನೂ 495 ರನ್ಗಳ ಭಾರಿ ಹಿನ್ನಡೆಯಲ್ಲಿದೆ.