ನವದೆಹಲಿ: ಮುಂಬರುವ ಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನಕ್ಕೆ ನಿರ್ಧಾರದ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಬಲವಾದ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 15 ರಂದು ಭಾರತ ವಿರುದ್ಧದ ಪಂದ್ಯ ಆಡದಿದ್ದರೆ ಪಾಕಿಸ್ತಾನ ಕ್ರಿಕೆಟಿಗೆ ಭಾರಿ ಹೊಡೆತ ಬೀಳಲಿದೆ. ದೇಶದ ವರ್ಚಸ್ಸು ಕುಸಿಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ವಿಶ್ವ ಕಪ್ ನಲ್ಲಿ ಆಡಲು ಹಾತೊರೆಯುತ್ತಿರುವ ಪಾಕಿಸ್ತಾನದ ಯುವ ಆಟಗಾರರ ಭವಿಷ್ಯದ ಮೇಲೂ ತೀವ್ರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಮಂಡಳಿ ಮಟ್ಟದ ಬಲವಂತದ ನಿರ್ಧಾರಗಳು ಆಟಗಾರರ ಮೇಲೆ ಧೀರ್ಘಾವಧಿಯ ಪರಿಣಾಮ ಉಂಟುಮಾಡಲಿದೆ ಎಂದು ಕಪಿಲ್ ದೇವ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಆಟಗಾರರು ಅಂತಹ ನಿರ್ಧಾರ ತೆಗೆದುಕೊಂಡರೆ, ಅವರು ಹೊರಗೆ ಬಂದು ಹಾಗೆ ಹೇಳಬಹುದು. ಆದರೆ ಆಟಗಾರರು ಆಡುವುದಿಲ್ಲ ಎಂದು ಮಂಡಳಿಯು ನಿರ್ಧರಿಸಿದಾಗ, ದೇಶದ ಖ್ಯಾತಿ ಕುಸಿಯುತ್ತದೆ. ಇದು ಪಾಕಿಸ್ತಾನಕ್ಕೆ ಸರಿಯಲ್ಲ. ಪಾಕಿಸ್ತಾನ ಅನೇಕ ಅದ್ಬುತ ಪ್ರತಿಭೆಗಳನ್ನು ಕ್ರಿಕೆಟಿಗೆ ನೀಡಿದೆ. ಆದರೆ ಅಂತಹ ಆಟಗಾರರನ್ನು ವಿಶ್ವಕಪ್ ಆಡಲು ಅನುಮತಿಸದಿದ್ದರೆ, ಆಟಕ್ಕೆ ಹಾಗೂ ಸ್ವಂತ ಆಟಗಾರರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಪಾಕಿಸ್ತಾನ, ಕೊಲಂಬೊದಲ್ಲಿ ಭಾರತದ ವಿರುದ್ಧ ಪಂದ್ಯವನ್ನಾಡುವುದಿಲ್ಲ ಎಂದು ಭಾನುವಾರ ಘೋಷಿಸಿದೆ. ಭದ್ರತಾ ಕಾರಣಗಳನ್ನುಉಲ್ಲೇಖಿಸಿ ಭಾರತದಿಂದ ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಲು ಬಾಂಗ್ಲಾದೇಶದ ಮನವಿಯನ್ನು ICC ತಿರಸ್ಕರಿಸಿದ ನಂತರ ಪಾಕಿಸ್ತಾನ ಈ ನಿರ್ಧಾರವನ್ನು ತೆಗೆದುಕೊಂಡಿದೆ.