ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯವನ್ನು ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಬಹಿಷ್ಕರಿಸಿದ್ದರ ಪರಿಣಾಮ ಆಯೋಜಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂದ್ಯದಿಂದಾಗಿ ಗೇಟ್ ಸೇಲ್ಸ್ ಮತ್ತು ಇತರ ಆದಾಯ ಮಾರ್ಗಗಳಿಂದ ಸಾಕಷ್ಯು ಲಾಭವನ್ನು ನಿರೀಕ್ಷಿಸುತ್ತಿದ್ದ ಶ್ರೀಲಂಕಾ ಕ್ರಿಕೆಟ್, ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯುವ ಪಾಕಿಸ್ತಾನದ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಮಂಗಳವಾರ ನಡೆದ ಶ್ರೀಲಂಕಾ ಕ್ರಿಕೆಟ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಭಾರತ ವಿರುದ್ಧ ಆಡದಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಸಂಪರ್ಕಿಸಲು ನಿರ್ಧರಿಸಲಾಯಿತು. ಅಂತಿಮವಾಗಿ ಪತ್ರವನ್ನು ಗುರುವಾರ ರವಾನಿಸಲಾಯಿತು.
ಕೊಲಂಬೊ ಸದ್ಯ ಸಂಪೂರ್ಣವಾಗಿ ಖಾಲಿಯಾಗಿರುವುದರಿಂದ, ಪಂದ್ಯ ನಡೆಯದಿದ್ದರೆ, ಮಂಡಳಿಯ ಆದಾಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಮತ್ತು ದ್ವೀಪ ರಾಷ್ಟ್ರದ ಆರ್ಥಿಕತೆಯ ಮೇಲೂ ಭಾರಿ ಪರಿಣಾಮ ಬೀರುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಎಂದು ಒಳಗಿನವರು NDTVಗೆ ತಿಳಿಸಿದ್ದಾರೆ. ಪಂದ್ಯ ರದ್ದಾದರೆ ಪ್ರಸಾಕರಿಂದ ಐಸಿಸಿಗೆ ಬರುವ ನಿಧಿಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ಆ ಮೂಲಕ ಸದಸ್ಯ ಮಂಡಳಿಗಳು ಮತ್ತು ಸಹವರ್ತಿಗಳ ಆದಾಯದ ಮೇಲೂ ಹೊಡೆತ ಉಂಟಾಗುತ್ತದೆ.
ಶ್ರೀಲಂಕಾ ಕ್ರಿಕೆಟ್ (SLC) ಪಾಕಿಸ್ತಾನವು ಶ್ರೀಲಂಕಾಕ್ಕೆ ಸಹಕಾರ ನೀಡುತ್ತದೆ ಎಂದು ಆಶಿಸುತ್ತಿದೆ. ಏಕೆಂದರೆ, ಈ ಹಿಂದೆ ಶ್ರೀಲಂಕಾ ಪಾಕ್ನಲ್ಲಿ ಆಡಲು ಅಸುರಕ್ಷಿತವಾಗಿದ್ದಾಗಲೂ ಪಾಕಿಸ್ತಾನ ಪ್ರವಾಸ ಮಾಡುವ ಮೂಲಕ ಬೆಂಬಲ ನೀಡಿತ್ತು. 2009ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿಯ ನಂತರ ಅನೇಕ ತಂಡಗಳು ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದವು. ಆದರೆ, ಶ್ರೀಲಂಕಾ ಒಗ್ಗಟ್ಟು ಪ್ರದರ್ಶಿಸಿ ಪ್ರವಾಸಗಳನ್ನು ಮುಂದುವರಿಸಿತು ಎಂಬುದನ್ನು ನೆನಪಿಸಿದೆ.
ಹೋಟೆಲ್ ಬುಕಿಂಗ್, ವಿಮಾನ ಬುಕಿಂಗ್ ರದ್ದತಿ ಮತ್ತು ಲಾಜಿಸ್ಟಿಕಲ್ ಪೂರೈಕೆದಾರರ ಅನಾನುಕೂಲತೆ ಸೇರಿದಂತೆ ಪ್ರವಾಸೋದ್ಯಮದ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಪಿಸಿಬಿಗೆ ಪತ್ರದಲ್ಲಿ ಎಸ್ಎಲ್ಸಿ ಎಚ್ಚರಿಕೆ ನೀಡಿದೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ಪೂರ್ಣ ಮೊತ್ತದ ಪಂದ್ಯವನ್ನು ಆಯೋಜಿಸಲು ಸಿದ್ಧವಿರುವುದಾಗಿ ಎಸ್ಎಲ್ಸಿ ಪತ್ರದಲ್ಲಿ ಉಲ್ಲೇಖಿಸಿದೆ.
ಈಮಧ್ಯೆ, ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಬಹುನಿರೀಕ್ಷಿತ ವಿಶ್ವಕಪ್ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಈಗಾಗಲೇ ಕೊಲಂಬೋಗೆ ತೆರಳು ಟಿಕೆಟ್ ಬುಕ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ನಿರ್ಧರಿಸಿ, ತನ್ನ ಎಲ್ಲ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಕೇಳಿತ್ತು. ಇದಕ್ಕೆ ಐಸಿಸಿ ನಿರಾಕರಿಸಿದ ನಂತರ ಪಂದ್ಯಾವಳಿಯಿಂದಲೇ ಹೊರಗುಳಿಯಿತು. ಇದೀಗ ಬಾಂಗ್ಲಾದೇಶವನ್ನು ಬೆಂಬಲಿಸಿ ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.