ಯುಎಸ್ಎ ಮತ್ತು ನಮೀಬಿಯಾ ಪಂದ್ಯ ಮುಗಿದಿದ್ದು, ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ನಮೀಬಿಯಾ ವಿರುದ್ಧ 96 ರನ್ಗಳ ಗೆಲುವು T20 ವಿಶ್ವಕಪ್ನಲ್ಲಿ ಭಾರತದ ದೊಡ್ಡ ಗೆಲುವು. ಇಶಾನ್ ಕಿಶನ್ 24 ಎಸೆತಗಳಲ್ಲಿ 61 ರನ್ ಗಳಿಸಿದರು, ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನ ನೀಡಿದರು. 52 ರನ್ ಗಳಿಸಿ 2 ವಿಕೆಟ್ ಕಬಳಿಸಿ ಕೇವಲ 21 ರನ್ ನೀಡಿದರು. ಸಂಜು ಸ್ಯಾಮ್ಸನ್ ಹೆಚ್ಚಿನ ರನ್ ಗಳಿಸಲು ವಿಫಲರಾದರು 8 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಲಭ್ಯತೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಎದುರಾಗಿದ್ದು, ಸ್ಯಾಮ್ಸನ್ ಅವರ ಫಾರ್ಮ್ ಕಳವಳಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೀವ್ರ ಜ್ವರ ಮತ್ತು ಹೊಟ್ಟೆ ಸೋಂಕಿನಿಂದ ಬಳಲುತ್ತಿದ್ದ ಅಭಿಷೇಕ್ ಶರ್ಮಾ, ಒಂದೆರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಬುಧವಾರ ದೆಹಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಳಿಕ ಗುರುವಾರ, ಅಭಿಷೇಕ್ ಅಭ್ಯಾಸದಲ್ಲೂ ಭಾಗಿಯಾಗಿಲ್ಲ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಗೈರಾಗಿದ್ದರು.
ಅಭಿಷೇಕ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜ್ಯು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡಿದರಾದರೂ, ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಸ್ಯಾಮ್ಸನ್ ಕ್ಯಾಚಿತ್ತು ಔಟಾದರು.
'ಸಂಜು ಸ್ಯಾಮ್ಸನ್ ಔಟಾದ ರೀತಿ... ಈ ಹಿಂದೆಯೂ ಆ ಏರಿಯಾದಲ್ಲಿ ಔಟಾಗಿದ್ದಾರೆ. ಮ್ಯಾನೇಜ್ಮೆಂಟ್ಗೆ ಕೊಂಚ ಆತಂಕ ಉಂಟು ಮಾಡುವ ಸಂಗತಿ ಇದೆಂಬುದು ಸ್ಪಷ್ಟವಾಗಿದೆ. ಏಕೆಂದರೆ, ಭಾನುವಾರದ ಪಂದ್ಯಕ್ಕೆ ಅಭಿಷೇಕ್ ಫಿಟ್ ಆಗದಿದ್ದಲ್ಲಿ ಸ್ಯಾಮ್ಸನ್ ಆಡುತ್ತಾರೆ. ಆ ಪಂದ್ಯಕ್ಕೆ ಅವರು ಎಲ್ಲ ರನ್ಗಳನ್ನು ಉಳಿಸಿಕೊಂಡಿದ್ದಾರೆ ಎಂದು ಭಾವಿಸುತ್ತೇವೆ. ನ್ಯೂಜಿಲೆಂಡ್ ವಿರುದ್ಧ ಅವರು ಗಳಿಸದ ಎಲ್ಲ ರನ್ಗಳನ್ನು ಅವರು ಇಂದು ಗಳಿಸುತ್ತಾರೆ ಎಂದೇ ಭಾವಿಸಲಾಗಿತ್ತು' ಎಂದು ಗವಾಸ್ಕ್ರ್ ಹೇಳಿದರು.
'ಇದರ ಹೊರತಾಗಿ, ಇದು ಉತ್ತಮ ಪ್ರದರ್ಶನವಾಗಿತ್ತು. ಇಶಾನ್ ಕಿಶನ್ ಬ್ಯಾಟ್ ಮಾಡಿದ ರೀತಿ ಮತ್ತು ಹಾರ್ದಿಕ್ ಅವರ ಪ್ರದರ್ಶನವೂ ಅದ್ಭುತವಾಗಿದೆ' ಎಂದರು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2026ರ ಪುರುಷರ ಟಿ20 ವಿಶ್ವಕಪ್ನ ಎ ಗುಂಪಿನ ಹಣಾಹಣಿಯಲ್ಲಿ ನಮೀಬಿಯಾ ವಿರುದ್ಧ 93 ರನ್ಗಳ ಬೃಹತ್ ಜಯ ಸಾಧಿಸಿದ ನಂತರ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ತಂಡದ ಆಲ್ರೌಂಡ್ ಪ್ರದರ್ಶನವನ್ನು ಶ್ಲಾಘಿಸಿದರು.
ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಇಶಾನ್ ಕಿಶನ್ ಸ್ಫೋಟಕ 61 ಮತ್ತು ಹಾರ್ದಿಕ್ ಪಾಂಡ್ಯ 52 ರನ್ ಕೊಡುಗೆ ನೀಡಿದರು. ನಂತರ ಸ್ಪಿನ್ನರ್ ವರುಣ್ ಚಕ್ರವರ್ತಿ ನಮೀಬಿಯಾದ ಮಧ್ಯಮ ಕ್ರಮಾಂಕವನ್ನು ಕೆಡವಿದರು. ಕೇವಲ 7 ರನ್ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾಲಿ ಚಾಂಪಿಯನ್ಗಳು ತಮ್ಮ ಎದುರಾಳಿಯನ್ನು 18.2 ಓವರ್ಗಳಲ್ಲಿಯೇ 116ಕ್ಕೆ ಆಲೌಟ್ ಮಾಡಿದರು.
'ಇದು ಬ್ಯಾಟ್ ಮಾಡಲು ಸುಲಭದ ವಿಕೆಟ್ ಆಗಿರಲಿಲ್ಲ. ಆದರೆ, ಇಶಾನ್ ಮತ್ತು ಸಂಜು ಆರಂಭ ನೀಡಿದ ರೀತಿಯು ಇದು ಕಷ್ಟಕರವಾದ ವಿಕೆಟ್ ಎಂದು ತೋರುತ್ತಿರಲಿಲ್ಲ. ನಂತರ ಶಿವಂ ಮತ್ತು ಹಾರ್ದಿಕ್ ನಡುವಿನ ಪಾಲುದಾರಿಕೆ ಉತ್ತಮವಾಗಿತ್ತು. ಎರಡು ಅಥವಾ ಮೂರು ತ್ವರಿತ ವಿಕೆಟ್ ಕಳೆದುಕೊಂಡ ನಂತರ ಅವರು ಬ್ಯಾಟ್ ಮಾಡಿದ ರೀತಿ ತುಂಬಾ ಶ್ಲಾಘನೀಯ ಎಂದು ನಾನು ಭಾವಿಸುತ್ತೇನೆ' ಎಂದು ನಾಯಕ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.