ದೇಶೀಯ ಕ್ರಿಕೆಟ್ ಅನ್ನು ಅಬ್ಬರದಿಂದ ಆರಂಭಿಸಿದ ಔಕಿಬ್ ನಬಿ, ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಹೆಸರಾದರು. ಹೊಸ ಬಾಲ್ನೊಂದಿಗೆ ಅದ್ಭುತವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಾಮರ್ಥ್ಯ ಹೊಂದುವ ಮೂಲಕ, ನಬಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಕಾಶ್ಮೀರಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಉದಯೋನ್ಮುಖ ಕ್ರಿಕೆಟಿಗನಿಗೆ ₹8.40 ಕೋಟಿ ನೀಡಿ ಖರೀದಿಸಿದೆ.
ಇದೀಗ, ತಮ್ಮ ಚೊಚ್ಚಲ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಆಡುತ್ತಿರುವ ನಬಿ, ಬೌಲಿಂಗ್ನಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ಪರವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ರಣಜಿ ಟ್ರೋಫಿ ಫೈನಲ್ನ ಮೂರನೇ ದಿನದಂದು ಕರ್ನಾಟಕದ ಅತಿದೊಡ್ಡ ವಿಕೆಟ್ ಅನ್ನು ನಬಿ ಪಡೆದರು. ಅವರು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ಕೆಎಲ್ ರಾಹುಲ್ ಮತ್ತು ನಬಿ ಮಾರ್ಚ್ 26 ರಿಂದ ಪ್ರಾರಂಭವಾಗುವ ಐಪಿಎಲ್ 2026ನೇ ಆವೃತ್ತಿಯಲ್ಲಿ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು. ನಂತರ, ಕರ್ನಾಟಕ ತಂಡವು ಆರಂಭದಲ್ಲಿಯೇ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್ ಮತ್ತು ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಈ ಪೈಕಿ ಔಕಿಬ್ ನವಿ ಅವರು ಮೂರು ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು.
2025/26ರ ರಣಜಿ ಟ್ರೋಫಿಯಲ್ಲಿ ಭಾರತದ ಟೆಸ್ಟ್ ಆರಂಭಿಕ ಆಟಗಾರ ಕೆಎಲ್ ರಾಹುಲ್, ನಬಿ ಅವರ 56ನೇ ವಿಕೆಟ್. ಇಡೀ ರಣಜಿ ಟ್ರೋಫಿ ಆವೃತ್ತಿಯಲ್ಲಿ ಪೇಸ್ ಬೌಲರ್ ಆಗಿ ನಬಿ 13ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ತಮ್ಮ ಚೊಚ್ಚಲ ಕಿರೀಟವನ್ನು ಎತ್ತಿ ಹಿಡಿದರೆ, ನಬಿ ಅದರ ಹಿಂದಿನ ದೊಡ್ಡ ಶಕ್ತಿಯಾಗಬಹುದು.
ಆರಂಭದಲ್ಲೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಸದ್ಯ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ. ಮಯಾಂಕ್ ಅವರಿಗೆ ಶ್ರೇಯಸ್ ಗೋಪಾಲ್ ಸಾಥ್ ನೀಡಿದ್ದಾರೆ. ಸದ್ಯ ಮಯಾಂಕ್ ಶತಕದತ್ತ ಹೊರಟಿದ್ದರೆ, ಗೋಪಾಲ್ ಅರ್ಧಶತಕ ಗಳಿಸುವತ್ತ ಬ್ಯಾಟಿಂಗ್ ಮುಂದುವರಿಸಿದ್ದಾರೆ.