ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಲ್ಲದೆ ಭಾರತ 'ಅಪೂರ್ಣ' ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಜಿಯೋಹಾಟ್ಸ್ಟಾರ್ನ 'ಗೇಮ್ ಪ್ಲಾನ್'ನಲ್ಲಿ ಮಾತನಾಡಿದ ಚೋಪ್ರಾ, ಪಾಂಡ್ಯ ಅವರನ್ನು ವಿಶೇಷವಾಗಿ ಹೊಗಳಿದರು. ಭಾರತೀಯ ತಂಡದಲ್ಲಿ ಅವರನ್ನು ಭರಿಸಲಾಗದ ಆಟಗಾರ ಎಂದು ಕರೆದರು.
'ಹಾರ್ದಿಕ್ ಪಾಂಡ್ಯ ಇಲ್ಲದೆ ಟೀಂ ಇಂಡಿಯಾ ಅಪೂರ್ಣ. ಇಡೀ ವಿಶ್ವದಲ್ಲಿ ಒಬ್ಬರೇ ಹಾರ್ದಿಕ್ ಇದ್ದಾರೆ. ಅವರು ಬ್ಯಾಟ್ ಮತ್ತು ಬಾಲ್ ಮೂಲಕ ತಂಡಕ್ಕೆ ನೀಡುವ ಕೊಡುಗೆಯನ್ನು ಭಾರತದಲ್ಲಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಪ್ಲೇಯಿಂಗ್ ಇಲೆವೆನ್ನಲ್ಲಿ ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ಅವರಂತಹ ಸ್ಪಿನ್ನರ್ ಬೇಕಾಗಬಹುದು. ಆದರೆ, ಎಂಟನೇ ಸ್ಥಾನದಲ್ಲಿ ಬ್ಯಾಟ್ಸ್ಮನ್ ಕೂಡ ಬೇಕು. ನೀವು ಎಲ್ಲವನ್ನೂ ಹೊಂದಲು ಸಾಧ್ಯವಿಲ್ಲ, ನೀವು ಹನ್ನೆರಡು ಆಟಗಾರರನ್ನು ಮೈದಾನಕ್ಕೆ ಇಳಿಸಲು ಸಾಧ್ಯವಿಲ್ಲ' ಎಂದಿದ್ದಾರೆ.
'ಹಾರ್ದಿಕ್ ಮಾತ್ರ ನಿಮಗಾಗಿ ಇದನ್ನು ಮಾಡಲು ಸಾಧ್ಯ. ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು ಮತ್ತು ಪರಿಣಾಮ ಬೀರಬಹುದು. ಅವರು ಡೆತ್ ಓವರ್ನಲ್ಲಿಯೂ ಬೌಲಿಂಗ್ ಮಾಡಬಹುದು. ಭಾರತ ಗೆದ್ದ 2024ರ ಟಿ20 ವಿಶ್ವಕಪ್ನ ಅಂತಿಮ ಓವರ್ ಅನ್ನು ಸಹ ಅವರೇ ಬೌಲಿಂಗ್ ಮಾಡಿದರು. ಹಾರ್ದಿಕ್ ಮಾತ್ರ ಅಂತಹ ಕೆಲಸಗಳನ್ನು ಮಾಡಲು ಸಾಧ್ಯ. ಅವರಂತಹ ಬೇರೆ ಯಾರನ್ನೂ ನೀವು ಕಾಣಲು ಸಾಧ್ಯವಿಲ್ಲ' ಎಂದರು.
'ನ್ಯೂಜಿಲೆಂಡ್ ವಿರುದ್ಧದ ಈ ಐದು ಪಂದ್ಯಗಳ ಟಿ20ಐ ಸರಣಿಯು ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡಕ್ಕೆ ಬಹಳ ಮುಖ್ಯವಾಗಿದೆ. ನ್ಯೂಜಿಲೆಂಡ್ ಕೂಡ ಸಂಪೂರ್ಣವಾಗಿ ಸಿದ್ಧವಾಗಿದೆ. ಏಕದಿನ ಸರಣಿಯಲ್ಲಿ ಅವರು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿದ್ದರು. ಆದರೆ, ಇಲ್ಲಿ ಅವರ ಪ್ರಮುಖ ಟಿ20 ವಿಶ್ವಕಪ್ ತಂಡ ಆಡುತ್ತಿದೆ' ಎಂದು ಚೋಪ್ರಾ ಹೇಳಿದರು.
'ತಂಡದ ಆಡಳಿತ ಮಂಡಳಿಯು ಸಮತೋಲನ ಕಾಯ್ದುಕೊಳ್ಳುವುದನ್ನು ಅಂತಿಮಗೊಳಿಸಲು ಸರಣಿಯನ್ನು ಬಳಸಿಕೊಳ್ಳಬೇಕು. ಅವರು ಇಬ್ಬರು ವೇಗಿಗಳು ಮತ್ತು ಮೂವರು ಸ್ಪಿನ್ನರ್ಗಳನ್ನು ಆಡಿಸುತ್ತಾರೆಯೇ? ಅವರಿಗೆ ಯಾವ ಬ್ಯಾಟ್ಸ್ಮನ್ಗಳು ಬೇಕು? ತಿಲಕ್ ವರ್ಮಾ ಫಿಟ್ ಆಗಿದ್ದರೆ, ರಿಂಕು ಸಿಂಗ್ಗೆ ಅವಕಾಶ ನೀಡುತ್ತಾರೆಯೇ ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಆಡಿಸುವುದನ್ನು ಮುಂದುವರಿಸುತ್ತಾರೆಯೇ? ಹೀಗೆ ಈ ಸರಣಿಗೂ ಮುನ್ನ ಉತ್ತರಿಸಬೇಕಾದ ಪ್ರಶ್ನೆಗಳು ಹಲವು ಇವೆ' ಎಂದು ಹೇಳಿದರು.
'ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ ಅತ್ಯಂತ ಆಕ್ರಣಕಾರಿ ಆಟಗಾರರಾಗಿದ್ದು, ಕಳೆದ ಆರೇಳು ತಿಂಗಳುಗಳಲ್ಲಿ ತಮ್ಮ ಆಟವನ್ನು ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಅವರು ಆಡುವ ಮೊದಲೇ ಎದುರಾಳಿಗಳು ಅವರ ಬಗ್ಗೆ ಎಚ್ಚರದಿಂದಿರುತ್ತಾರೆ. ಇದು ಟಿ20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರಿಂದ ಉಂಟಾಗುತ್ತಿದ್ದ ಭಯದಂತೆಯೇ ಇದೆ' ಎಂದು ಅವರು ಹೇಳಿದರು.
'ಭಾರತದ ನಾಯಕ ಸೂರ್ಯಕುಮಾರ್ ತಾನೊಬ್ಬ 360 ಡಿಗ್ರಿ ಆಟಗಾರ ಮತ್ತು ಮೈದಾನದಾದ್ಯಂತ ಸ್ಕೋರ್ ಮಾಡಬಲ್ಲೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಇನಿಂಗ್ಸ್ ಆರಂಭದಲ್ಲಿಯೇ ಅವರು ತಂತ್ರಗಳನ್ನು ಹೆಣೆಯಬೇಕು. ನೇರವಾಗಿ ಮತ್ತು ಮೈದಾನದ ಉದ್ದಕ್ಕೂ ಆಡಲು ನೋಡಬೇಕು' ಎಂದು ಸಲಹೆ ನೀಡಿದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯು ಭಾರತದ T20 ಯೋಜನೆಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.