ರೋಹಿತ್ ಶರ್ಮಾ 
ಕ್ರಿಕೆಟ್

'ಅದು ಕೊನೆಯ ಪಂದ್ಯವಾಗಿರುವುದಿಲ್ಲ': ಲಾರ್ಡ್ಸ್ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಕುರಿತಾದ ವದಂತಿಗಳಿಗೆ BCCI ಸ್ಪಷ್ಟನೆ!

'ಇಂಗ್ಲೆಂಡ್ ಪ್ರವಾಸದ ನಂತರದ ಯೋಜನೆಗಳಲ್ಲಿ ರೋಹಿತ್ ಅವರ ಹೆಸರಿಲ್ಲ ಮತ್ತು ಈ ಸರಣಿಯ ಬಳಿಕ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಆಯ್ಕೆಗಾರರು ಈಗಾಗಲೇ ಅವರಿಗೆ (ರೋಹಿತ್) ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ರೋಹಿತ್ ಶರ್ಮಾ ನಿವೃತ್ತಿ ಕುರಿತು ಎದ್ದಿರುವ ವದಂತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಖಡಕ್ ಪ್ರತಿಕ್ರಿಯೆ ನೀಡಿದ್ದು, ಸದ್ಯಕ್ಕೆ ಅವರು ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆಯ್ಕೆಗಾರರು ರೋಹಿತ್ ಅವರಿಗೆ, ಇನ್ಮುದೆ ಏಕದಿನ ತಂಡದ ಯೋಜನೆಗಳಲ್ಲಿ ತಮ್ಮನ್ನು ಪರಿಗಣಿಸುವುದಿಲ್ಲ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ನಂತರ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಬಹುದು ಎಂದು ತಿಳಿಸಿದ್ದಾರೆ ಎಂಬ ವರದಿಗಳು ಗುರುವಾರ ಹೊರಬಂದಿದ್ದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಂತಹ ಎಲ್ಲ ವರದಿಗಳನ್ನು ತಳ್ಳಿಹಾಕಿದ್ದು, ತಂಡದ ಯೋಜನೆಗಳಲ್ಲಿ ಇರುವವರೆಗೂ ರೋಹಿತ್ ಭಾರತಕ್ಕಾಗಿ ಆಡುವುದನ್ನು ಮುಂದುವರಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಸೈಕಿಯಾ, ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯವು ರೋಹಿತ್ ಶರ್ಮಾ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಏಕದಿನ ತಂಡದ ಯೋಜನೆಗಳಿಂದ ರೋಹಿತ್ ಅವರನ್ನು ಕೈಬಿಡಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, ರೋಹಿತ್ ಏಕದಿನ ತಂಡದ ನಿಯಮಿತ ಸದಸ್ಯರಾಗಿದ್ದಾರೆ ಮತ್ತು ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಖಚಿತವಾಗಿ ಹೇಳಿದರು.

'ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯವೇ ರೋಹಿತ್ ಅವರ ಕೊನೆಯ ಪಂದ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂಬುದನ್ನು ನಾನು ದೃಢವಾಗಿ ಹೇಳಬಯಸುತ್ತೇನೆ. ರೋಹಿತ್ ಭಾರತೀಯ ಏಕದಿನ ತಂಡದ ನಿಯಮಿತ ಸದಸ್ಯರಾಗಿದ್ದಾರೆ ಮತ್ತು ತಂಡದ ಯೋಜನೆಗಳಲ್ಲಿ ಇರುವವರೆಗೂ ಅವರು ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ. ಸರಳವಾಗಿ ಹೇಳುವುದಾದರೆ, ಲಾರ್ಡ್ಸ್ ಏಕದಿನ ಪಂದ್ಯವು ಅವರ ಕೊನೆಯ ಪಂದ್ಯವಾಗಿರುವುದಿಲ್ಲ' ಎಂದು ಹೇಳಿದರು.

ಗುರುವಾರ ಬಂದ ವರದಿಯೊಂದರ ಪ್ರಕಾರ, ಆಯ್ಕೆ ಸಮಿತಿಯು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮುನ್ನ, ಕಳೆದ ವಾರ ತೆಗೆದುಕೊಂಡ ನಿರ್ಧಾರದ ಕುರಿತು ರೋಹಿತ್ ಹಾಗೂ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮಾತನಾಡಿದೆ. ತಮಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ದೀರ್ಘಕಾಲದಿಂದ ಅವಕಾಶಕ್ಕಾಗಿ ಕಾಯುತ್ತಿರುವ ಜೈಸ್ವಾಲ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸಿದೆ ಎನ್ನಲಾಗಿತ್ತು.

'ಇಂಗ್ಲೆಂಡ್ ಪ್ರವಾಸದ ನಂತರದ ಯೋಜನೆಗಳಲ್ಲಿ ರೋಹಿತ್ ಅವರ ಹೆಸರಿಲ್ಲ ಮತ್ತು ಈ ಸರಣಿಯ ಬಳಿಕ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಆಯ್ಕೆಗಾರರು ಈಗಾಗಲೇ ಅವರಿಗೆ (ರೋಹಿತ್) ತಿಳಿಸಿದ್ದಾರೆ. ತಮ್ಮ ದೈಹಿಕ ಕ್ಷಮತೆಯನ್ನು (ಫಿಟ್‌ನೆಸ್) ಸುಧಾರಿಸಿಕೊಳ್ಳಲು ಶ್ರಮಿಸಿದ ನಂತರವೂ ಅವರು ತಮ್ಮ ಆಟವನ್ನು ಮುಂದುವರಿಸಲು ಬಯಸಿದ್ದರು. ಆದಾಗ್ಯೂ, ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯ್ಕೆಗಾರರು ಶರ್ಮಾ ಅವರ ವಿವೇಚನೆಗೆ ಬಿಟ್ಟಿದ್ದಾರೆ' ಎಂದು ಬಿಸಿಸಿಐ (BCCI) ಮೂಲವೊಂದು ತಿಳಿಸಿದೆ.

ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ರೋಹಿತ್ ಬಿಸಿಸಿಐ ಜೊತೆ ಮಾತನಾಡಲು ಪ್ರಯತ್ನಿಸಿದ್ದರು ಎಂಬ ವರದಿಗಳೂ ಬಂದಿವೆ. ಶುಕ್ರವಾರ ಅವರ ಪೋಷಕರು ಲಂಡನ್‌ಗೆ ಆಗಮಿಸಿದ ಬೆನ್ನಲ್ಲೇ ಈ ಊಹಾಪೋಹಗಳು ಮತ್ತಷ್ಟು ಬಲಗೊಂಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು: ಆತಂಕ ಪಡುವ ಅಗತ್ಯವಿಲ್ಲ ಎಂದ ಹೆಚ್​​ಡಿ ಕುಮಾರಸ್ವಾಮಿ, ಆಸ್ಪತ್ರೆ ಬುಲೆಟಿನ್ ಬಿಡುಗಡೆ

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ Sir Garry Sobers ನಿಧನ, 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್!

ಯಲಹಂಕದಲ್ಲಿ ಭೀಕರ ಅಪಘಾತ, ಟ್ಯಾಂಕರ್ ಢಿಕ್ಕಿ,: ಶಾಲೆಗೆ ಮೊಮ್ಮಕ್ಕಳ ಬಿಡಲು ಹೋಗಿದ್ದ ವೃದ್ಧ ದಾರುಣ ಸಾವು! Video

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!