ಆರ್ ಸಿಬಿ ಅಭಿಮಾನಿಗಳ ಸಂಭ್ರಮ 
ಕ್ರಿಕೆಟ್

IPL 2026 Final: 2ನೇ ಬಾರಿಗೆ ಪ್ರಶಸ್ತಿ ಗೆದ್ದ RCB, ಬೆಂಗಳೂರು ಅಷ್ಟೇ ಅಲ್ಲ.. ದೇಶಾದ್ಯಂತ ಅಭಿಮಾನಿಗಳ ವಿಜಯೋತ್ಸವ

ಪಂದ್ಯದ ಕೊನೆಯ ಕ್ಷಣಗಳಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಭರ್ಜರಿ ಸಿಕ್ಸರ್ ಆರ್‌ಸಿಬಿಗೆ ವಿಜಯ ತಂದುಕೊಟ್ಟ ತಕ್ಷಣವೇ ಕ್ರೀಡಾಂಗಣ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸಂಭ್ರಮ ಸ್ಫೋಟಗೊಂಡಿತು.

ಬೆಂಗಳೂರು: ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಬಳಿಕ, ದೇಶದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಐತಿಹಾಸಿಕ ಗೆಲುವಿನೊಂದಿಗೆ ಆರ್‌ಸಿಬಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿತು. ಪಂದ್ಯದ ಕೊನೆಯ ಕ್ಷಣಗಳಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಭರ್ಜರಿ ಸಿಕ್ಸರ್ ಆರ್‌ಸಿಬಿಗೆ ವಿಜಯ ತಂದುಕೊಟ್ಟ ತಕ್ಷಣವೇ ಕ್ರೀಡಾಂಗಣ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸಂಭ್ರಮ ಸ್ಫೋಟಗೊಂಡಿತು. ಲಕ್ಷಾಂತರ ಅಭಿಮಾನಿಗಳು ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ, ನೃತ್ಯ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಅಚ್ಚರಿ ಎಂದರೆ ಆರ್ ಸಿಬಿಯ ತವರು ಜಿಲ್ಲೆಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿರುವಂತೆಯೇ ದೇಶಾದ ವಿವಿಧ ಭಾಗಗಳಲ್ಲಿನ ಅಭಿಮಾನಿಗಳೂ ಕೂಡ ಆರ್ ಸಿಬಿ ಗೆಲುವನ್ನು ಸಂಭ್ರಮಿಸಿದರು. ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ತಂಡದ ತವರು ಮೈದಾನವಾಗಿದ್ದರೂ ಅಲ್ಲಿ ಬಹುತೇಕ ಆರ್ ಸಿಬಿ ಅಭಿಮಾನಿಗಳೇ ತಂಬಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮದ ವಿಡಿಯೋಗಳು ಮತ್ತು ಚಿತ್ರಗಳು ವೈರಲ್ ಆಗಿವೆ.

ಮೈದಾನದಲ್ಲೇ ಕುಣಿದು ಕುಪ್ಪಳಿಸಿದ ಆರ್ ಸಿಬಿ ಆಟಗಾರರು

ಫೈನಲ್ ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯೂ ವಿಶೇಷವಾಗಿತ್ತು. ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ದೃಶ್ಯಗಳು ಅಭಿಮಾನಿಗಳ ಮನ ಗೆದ್ದವು. ಆಟಗಾರರು ಟ್ರೋಫಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿ ಸಾವಿರಾರು ಅಭಿಮಾನಿಗಳೊಂದಿಗೆ ವಿಜಯೋತ್ಸವದಲ್ಲಿ ಭಾಗವಹಿಸಿದರು.

ದುರಂತ ಮರೆಯದ ನಾಯಕ ಪಟಿದಾರ್

ಆದರೆ ಸಂಭ್ರಮದ ನಡುವೆ ಕಳೆದ ವರ್ಷದ ದುರಂತವನ್ನೂ ತಂಡ ಸ್ಮರಿಸಿತು. 2025ರ ಮೊದಲ ಪ್ರಶಸ್ತಿ ಗೆಲುವಿನ ಬಳಿಕ ನಡೆದ ಜನಸಂದಣಿಯ ದುರಂತದಲ್ಲಿ ಮೃತಪಟ್ಟವರನ್ನು ನೆನೆದು, ನಾಯಕ ರಾಜತ್ ಪಾಟೀದಾರ್ ಈ ಪ್ರಶಸ್ತಿಯನ್ನು ಆ ಕುಟುಂಬಗಳಿಗೆ ಅರ್ಪಿಸಿದರು. “ಅವರು ನಮ್ಮ ಆರ್‌ಸಿಬಿ ಕುಟುಂಬದ ಸದಸ್ಯರು” ಎಂದು ಹೇಳುವ ಮೂಲಕ ಭಾವನಾತ್ಮಕ ಸಂದೇಶ ರವಾನಿಸಿದರು.

ಕೊಹ್ಲಿ ನಿರ್ಣಾಯಕ ಪಾತ್ರ

ಈ ಪ್ರಶಸ್ತಿ ಗೆಲುವಿನಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಮತ್ತೊಮ್ಮೆ ನಿರ್ಣಾಯಕವಾಗಿತ್ತು. ಫೈನಲ್‌ನಲ್ಲಿ ಅಜೇಯ ಇನ್ನಿಂಗ್ಸ್ ಆಡಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ರಾಜತ್ ಪಾಟೀದಾರ್ ಅವರ ನಾಯಕತ್ವ, ಸಮತೋಲಿತ ತಂಡದ ಸಂಯೋಜನೆ ಮತ್ತು ಆಟಗಾರರ ಒಗ್ಗಟ್ಟಿನ ಪ್ರದರ್ಶನ ಆರ್‌ಸಿಬಿಯ ಯಶಸ್ಸಿಗೆ ಪ್ರಮುಖ ಕಾರಣಗಳಾದವು.

ದೇಶಾದ್ಯಂತ ಸಂಭ್ರಮ

ಕರ್ನಾಟಕ ಮಾತ್ರವಲ್ಲದೆ, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೊಲ್ಕತ್ತಾ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಶೇಷ ವೀಕ್ಷಣಾ ಕಾರ್ಯಕ್ರಮಗಳು, ವಿಜಯ ಮೆರವಣಿಗೆಗಳು ಮತ್ತು ಸಂಭ್ರಮಾಚರಣೆಗಳನ್ನು ಆಯೋಜಿಸಿದರು. ಅನೇಕ ಕಡೆಗಳಲ್ಲಿ ಅಭಿಮಾನಿಗಳು ವಿರಾಟ್ ಕೊಹ್ಲಿ, ರಾಜತ್ ಪಾಟೀದಾರ್ ಹಾಗೂ ಇತರೆ ಆಟಗಾರರ ಭಾವಚಿತ್ರಗಳಿರುವ ಬ್ಯಾನರ್‌ಗಳನ್ನು ಹಿಡಿದು ಸಂಭ್ರಮಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಸಿನಿಮಾ ತಾರೆಯರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಆರ್‌ಸಿಬಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಕೂಡ ಆಟಗಾರರನ್ನು ಅಭಿನಂದಿಸಿ, ಸತತ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮುಗಿಲುಮಟ್ಟಿದ ಸಂಭ್ರಮ

ಆರ್ ಸಿಬಿ ತವರು ಬೆಂಗಳೂರು ನಗರದಲ್ಲಿ ಮಧ್ಯರಾತ್ರಿವರೆಗೂ ಹಬ್ಬದ ವಾತಾವರಣ ನೆಲೆಸಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹಾಗೂ ನಗರದ ಹಲವೆಡೆ ಸಾವಿರಾರು ಅಭಿಮಾನಿಗಳು ಕೆಂಪು ಬಣ್ಣದ ಆರ್‌ಸಿಬಿ ಜೆರ್ಸಿಗಳನ್ನು ಧರಿಸಿ ಸೇರಿ ಸಂಭ್ರಮಿಸಿದರು. “ಆರ್‌ಸಿಬಿ... ಆರ್‌ಸಿಬಿ...” ಮತ್ತು “ಈ ಸಲ ಕಪ್ ನಮ್ಮದು” ಎಂಬ ಘೋಷಣೆಗಳು ನಗರದಾದ್ಯಂತ ಮೊಳಗಿದವು.

ಸುಧೀರ್ಘ ವೈಫಲ್ಯದ ಬಳಿಕ ಸತತ ಯಶಸ್ಸು

ಆರ್‌ಸಿಬಿಯ ಈ ಯಶಸ್ಸು ಅಭಿಮಾನಿಗಳಿಗೆ ವಿಶೇಷ ಭಾವನಾತ್ಮಕ ಕ್ಷಣವಾಗಿತ್ತು. 2009, 2011 ಮತ್ತು 2016ರ ಫೈನಲ್‌ಗಳಲ್ಲಿ ಸೋಲು ಕಂಡಿದ್ದ ತಂಡಕ್ಕೆ ದೀರ್ಘಕಾಲ ಬೆಂಬಲ ನೀಡಿದ ಅಭಿಮಾನಿಗಳು ಹಲವು ವರ್ಷಗಳ ನಿರೀಕ್ಷೆಯ ಬಳಿಕ 2025ರಲ್ಲಿ ಮೊದಲ ಪ್ರಶಸ್ತಿ ಸಂಭ್ರಮವನ್ನು ಅನುಭವಿಸಿದ್ದರು. ಇದೀಗ ಸತತ ಎರಡನೇ ಪ್ರಶಸ್ತಿ ಗೆಲುವು ಆರ್‌ಸಿಬಿಯನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದಾಗಿ ರೂಪಿಸಿದೆ.

ದೇಶದ ಕೋಟ್ಯಾಂತರ ಅಭಿಮಾನಿಗಳಿಗೆ ಈ ಗೆಲುವು ಕೇವಲ ಕ್ರಿಕೆಟ್ ಪ್ರಶಸ್ತಿಯಲ್ಲ. ಇದು ನಂಬಿಕೆ, ತಾಳ್ಮೆ, ಹೋರಾಟ ಮತ್ತು ಅಭಿಮಾನಿಗಳ ಅಚಲ ಬೆಂಬಲದ ಪ್ರತೀಕವಾಗಿದೆ. ರಾತ್ರಿ ಪೂರ್ತಿ ಆಕಾಶದಲ್ಲಿ ಪಟಾಕಿಗಳ ಹೊಳಪು, ರಸ್ತೆಗಳ ಮೇಲೆ ಅಭಿಮಾನಿಗಳ ಸಂಭ್ರಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದ ಅಭಿನಂದನೆಗಳ ನಡುವೆ ಒಂದೇ ಸಂದೇಶ ಮೊಳಗುತ್ತಿತ್ತು. ಆರ್‌ಸಿಬಿಯ ಸುವರ್ಣ ಯುಗ ಆರಂಭವಾಗಿದೆ ಎಂದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ದರ ಏಷ್ಟಿದೆ?

IPL 2026: ಬರೊಬ್ಬರಿ 5 ಪ್ರಶಸ್ತಿ, ಅದರಿಂದ Vaibhav Sooryavanshi ಗಳಿಸಿದ ಹಣ ಎಷ್ಟು ಕೋಟಿ ಗೊತ್ತಾ?

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವನ್ನು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!

IPL 2026: ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಸ್ತ್ ಡ್ಯಾನ್ಸ್! Video ವೈರಲ್

ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ: ಜೂನ್ 5 ರವರೆಗೆ 'ಯೆಲ್ಲೂ' ಅಲರ್ಟ್ ಘೋಷಣೆ!

SCROLL FOR NEXT