ಅಹ್ಮದಾಬಾದ್: ಐಪಿಎಲ್ 2026ರ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ.
ಈ ನಡುವೆ 18 ವರ್ಷಗಳ ಕಾಲ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿದ್ದ ವಿರಾಟ್ ಕೊಹ್ಲಿ ಈಗ ಎರಡು ಪ್ರಶಸ್ತಿಗಳ ಒಡೆಯರಾಗಿದ್ದಾರೆ. 37 ವರ್ಷ ವಯಸ್ಸಿನಲ್ಲಿಯೂ ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಹಂಬಲ ಹೊಂದಿರುವ ಕೊಹ್ಲಿ, ಐಪಿಎಲ್ 2026ರ ಫೈನಲ್ನಲ್ಲಿ ತಮ್ಮ ಟಿ20 ವೃತ್ತಿಜೀವನದ ಅತಿ ವೇಗದ ಅರ್ಧಶತಕವನ್ನು ಸಿಡಿಸುವ ಮೂಲಕ, ಆರ್ಸಿಬಿಗೆ ಗೆಲುವು ತಂದುಕೊಡುವ ರನ್ಗಳನ್ನು ಬಾರಿಸುವ ತಮ್ಮ ಬಹುಕಾಲದ ಕನಸನ್ನೂ ನನಸಾಗಿಸಿಕೊಂಡರು.
ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ನಲ್ಲಿ ಅಜೇಯ 75 ರನ್ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ, ಆರ್ಸಿಬಿಯ ಎರಡನೇ ಐಪಿಎಲ್ ಪ್ರಶಸ್ತಿಗೆ ಭದ್ರ ಅಡಿಪಾಯ ಹಾಕಿದರು. ಇಡೀ ಋತುವಿನಲ್ಲಿ ತಂಡ ತೋರಿದ ಪ್ರಾಬಲ್ಯದ ಬಗ್ಗೆ ಅವರು ಅಪಾರ ಸಂತೃಪ್ತಿ ವ್ಯಕ್ತಪಡಿಸಿದರು.
"ಇದು ಕನಸಿನಲ್ಲಿ ಕಾಣುವ ಕ್ಷಣ. ಗೆಲುವಿನ ರನ್ಗಳನ್ನು ನಾನು ಬಾರಿಸಬೇಕು ಎಂಬುದನ್ನು ಅನೇಕ ಬಾರಿ ಕಲ್ಪಿಸಿಕೊಂಡಿದ್ದೆ," ಎಂದು ಪಂದ್ಯಾನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಹ್ಲಿ ಹೇಳಿದರು.
15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಮಾತು
ಇದೇ ವೇಳೆ ರಾಜಸ್ತಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಬಗ್ಗೆಯೂ ಮಾತನಾಡಿದ ಕೊಹ್ಲಿ 15 ವರ್ಷದ ಪುಟ್ಟ ಪೋರನ ಬ್ಯಾಟಿಂಗ್ ಶೈಲಿಗೆ ತಮ್ಮ ಶ್ಲಾಘನೆ ವ್ಯಕ್ತಪಡಿಸಿದರು. ಅವರ ಹೆಸರು ಹೇಳದ ಕೊಹ್ಲಿ ನೇರವಾಗಿ ಹೆಸರು ಉಲ್ಲೇಖಿಸದಿದ್ದರೂ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಪ್ರಭಾವದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು. ಈ ಋತುವಿನಲ್ಲಿ ಯುವ ಆಟಗಾರರ ಪ್ರದರ್ಶನವೇ ತಮ್ಮ ಆಟದ ದೃಷ್ಟಿಕೋನವನ್ನು ಬದಲಾಯಿಸಲು ಕಾರಣವಾಯಿತು ಎಂದು ಹೇಳಿದರು.
25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬಗ್ಗೆ ಪ್ರಶ್ನಿಸಿದಾಗ, ತಾವು ಇನ್ನೂ ಆಟದ ವಿದ್ಯಾರ್ಥಿಯೇ ಎಂಬುದನ್ನು ಕೊಹ್ಲಿ ಮತ್ತೊಮ್ಮೆ ಸಾಬೀತುಪಡಿಸಿದರು.
"ಇಂದಿನ ಕ್ರಿಕೆಟ್ನ ಬೇಡಿಕೆ ಹಾಗಾಗಿದೆ. ಅಷ್ಟು ಚಿಕ್ಕ ವಯಸ್ಸಿನ ಆಟಗಾರರು ನಿಮ್ಮನ್ನು ಇನ್ನಷ್ಟು ಆಕ್ರಮಣಕಾರಿ ಆಟವಾಡಲು ಪ್ರೇರೇಪಿಸುತ್ತಿದ್ದಾರೆ," ಎಂದು ಅವರು ನಗುತ್ತಾ ಹೇಳಿದರು.
ಆದರೆ ಆ ಮಾತಿನ ಗಂಭೀರತೆಯನ್ನು ಯಾರೂ ನಿರ್ಲಕ್ಷ್ಯ ಮಾಡಲಿಲ್ಲ. "ನಾನು ನನ್ನ ಆಟವನ್ನು ಸಂಪೂರ್ಣವಾಗಿ ಬದಲಾಯಿಸಿಲ್ಲ. ಆದರೆ ನನ್ನ ಮನಸ್ಥಿತಿಯನ್ನು ಬದಲಾಯಿಸಬೇಕಾಯಿತು. ಬೌಲರ್ಗಳ ಮೇಲೆ ದಾಳಿ ನಡೆಸಿ ಹೆಚ್ಚುವರಿ ರನ್ಗಳನ್ನು ಗಳಿಸಬೇಕಾಯಿತು," ಎಂದು ಅವರು ಹೇಳಿದರು.
37ನೇ ವಯಸ್ಸಿನಲ್ಲಿಯೂ ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರು ತಮ್ಮ ಚಿಂತನಾ ವಿಧಾನ ಮತ್ತು ಆಟದ ದೃಷ್ಟಿಕೋನವನ್ನು ಬದಲಾಯಿಸಲು ಪ್ರೇರೇಪಿಸಿದ್ದಾರೆ ಎಂಬುದನ್ನು ಕೊಹ್ಲಿ ಒಪ್ಪಿಕೊಂಡರು.